ವಿಜಯಪುರ: ಸಿಗರೇಟ್ ಹೊಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರ ಮಧ್ಯೆ ಗಲಾಟೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪಗಿ ಪಟ್ಟಣದ ಹೊರ ಭಾಗದ ಢಾಬಾದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಿಗರೇಟ್ ಸೇದಿ ಹೊಗೆ ಬಿಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ದಿಲೀಪ ಚೌವ್ಹಾಣ್ (29 ), ಮಹಾಂತೇಶ ಚೌವ್ಹಾಣ್ ( 26) ಹಲ್ಲೆಗೆ ಒಳಗಾದವರು. ಸತೀಶ ಬೂದಿಹಾಳ ಮತ್ತು ಈಶ್ವರ ಸವದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದಿಲೀಪ ಹಾಗೂ ಮಹಾಂತೇಶ ಘಟನೆ ಕುರಿತು ಆರೋಪಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಬಿಜೆಪಿ ಮುಖಂಡರೊಬ್ಬರು ರಾಜಿ ಪಂಚಾಯಿತಿ ಮಾಡೋಣವೆಂದು ಠಾಣೆ ಹೊರಗಡೆ ಅವರನ್ನು ಕರೆದುಕೊಂಡು ಹೋಗಿ ಮತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗ್ತಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗೆ ಕೂಡ ಬಂದ ಆರೋಪಿಗಳು ಅಲ್ಲೂ ಕೂಡ ದಿಲೀಪ ಹಾಗೂ ಮಹಾಂತೇಶ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ದೃಶ್ಯ ಜಿಲ್ಲಾಸ್ಪತ್ರೆ ಬಳಿಯಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಜೆಪಿ ಮುಖಂಡ ಹಾಗೂ ಆತನ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ಠಾಣೆ ಎದುರು ಪ್ರತಿಭಟನೆ ಮಾಡುವುದಾಗಿ ಹಲ್ಲೆಗೊಳಗಾದವರ ಕುಟುಂಬಸ್ಥರು ಎಚ್ಚರಿಸಿದ್ದಾರೆ.