ವಿಜಯಪುರ: ಹಳೇ ವೈಷಮ್ಯ ಹಿನ್ನೆಲೆ ಎರಡು ಗುಂಪುಗಳು ಪರಸ್ಪರ ಮಾರಾಕಾಸ್ತ್ರಗಳಿಂದ ಹೊಡೆದಾಡಿಕೊಂಡು ಹಲವರಿಗೆ ಗಾಯವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನೇಬಗೇರಿ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ಮಹಿಳೆ ಸೇರಿ 5 ಜನರ ಪರಿಸ್ಥಿತಿ ಗಂಭೀರವಾಗಿದೆ. ವೆಂಕಟೇಶ ನಾಯಕ, ಶಿವಾಜಿ ಲಮಾಣಿ, ರವಿ ಲಮಾಣಿ, ರೇಷ್ಮಾ ಲಮಾಣಿ, ಶ್ರೀಕಾಂತ ನಾಯಕ ಇವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. 13 ಜನರಿಗೆ ಗಾಯಗಳಾಗಿದ್ದು, ಇವರಿಗೆ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಗಾಯಾಳುಗಳ ಮೇಲೂ ಹಲ್ಲೆ: ಇನ್ನು ವಿಪರ್ಯಾಸ ಅಂದ್ರೆ ಗಾಯಗೊಂಡವರನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದ ಸಂದರ್ಭದಲ್ಲೂ ಒಂದು ಗುಂಪಿನ ಕೆಲವರು ಹಿಂಬಾಲಿಸಿಕೊಂಡು ಬಂದು ಆಸ್ಪತ್ರೆಯಲ್ಲೂ ಗಾಯಾಳುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲ ಕಾಲ ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ ಡಿಎಸ್ಪಿ ಮಹೇಶ್ವರಗೌಡ ಗುಂಪನ್ನು ಚದುರಿಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಇನ್ನು ನೇಬಗೇರಿ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಿಡಗುಂದಿ ಠಾಣೆಗಳ ಪಿಎಸೈ ಮತ್ತು ಜಿಲ್ಲಾ ಮೀಸಲು ಪಡೆಯ ಪೊಲೀಸರು ಗ್ರಾಮದಲ್ಲಿ ಮುಕ್ಕಾಂ ಹೂಡಿದ್ದಾರೆ. ಸದ್ಯ ಪರಿಸ್ಥತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಗಲಾಟೆಗೆ ಕಾರಣ:
ನೇಬಗೇರಿ ಗ್ರಾಮ ಮತ್ತು ತಾಂಡಾ ಎರಡೂ ಒಂದಕ್ಕೊಂದು ಹೊಂದಿಕೊಂಡಿವೆ. ತಾಂಡಾದಲ್ಲಿ ಮತ್ತು ಊರಲ್ಲಿ ಲಂಬಾಣಿ ಸಮಾಜದವರು ವಾಸವಾಗಿದ್ದಾರೆ. ಈ ಸಮಾಜದ ಎರಡು ಕುಟುಂಬಗಳ ನಡುವೆ ಸೇವಾಲಾಲ ಭವನಕ್ಕೆ ಮೀಸಲಿರಿಸಿದ್ದ ಜಾಗಕ್ಕೆ ಸಂಬಂಧಿಸಿದಂತೆ ಹಳೇ ವೈಷಮ್ಯ ಇದೆ ಎನ್ನಲಾಗಿದೆ. ಗ್ರಾಮದಲ್ಲಿ ಒಂದು ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರು ನಿಧನರಾಗಿದ್ದರಿಂದ ಅವರ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಆ ಕುಟುಂಬದ ಬಂಧುಗಳು ಒಂದೆಡೆ ಸೇರಿ ಚರ್ಚಿಸಿದ್ದಾರೆ. ಈ ಸಂದರ್ಭ ಎರಡು ಕುಟುಂಬಗಳ ನಡುವೆ ಇದ್ದ ವೈಷಮ್ಯ ಮತ್ತೇ ಭುಗಿಲೆದ್ದು ಈ ಮಾರಾಮಾರಿ ನಡೆದಿದೆ ಎನ್ನಲಾಗಿದೆ.