ವಿಜಯಪುರ: ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಜಿ ಪ್ಲಸ್ ಮಾದರಿಯಲ್ಲಿ ತಯಾರಾಗುತ್ತಿರುವ ಮನೆಗಳನ್ನು ಹಂಚುವಂತೆ ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡಿಸಿ, ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಜಿ ಪ್ಲಸ್ ಮಾದರಿಯಲ್ಲಿ ತಯಾರಾಗುತ್ತಿರುವ ಮನೆಗಳು, ಕಡು ಬಡವರ ಕೈಗೆಟುವಂತಿಲ್ಲ. ಸಾಮಾನ್ಯ ವರ್ಗದರಿಂದ 1.80 ಲಕ್ಷ ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಂದ 1.30 ಲಕ್ಷ ಹಣವನ್ನ ಸರ್ಕಾರ ಜನರಿಂದ ಮನೆಗಾಗಿ ಹಣ ಪಡೆಯುತ್ತಿದೆ. ಆದ್ರೆ ಬಡವರು ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿರೋದರಿಂದ ಹಣ ಭರಿಸಲಾಗುತ್ತಿಲ್ಲ. ಹೀಗಾಗಿ ವಿಜಯಪುರದಲ್ಲಿ ತಯಾರಾಗುತ್ತಿರುವ ಜಿ ಪ್ಲಸ್ ಮನೆಗಳು ಯಶಸ್ವಿಯಾಗುತ್ತಿಲ್ಲ. ಹೆಚ್ಚಾಗಿ ಆಶ್ರಯ ರಹಿತವಲ್ಲದ ಜನರು ಜಿ ಪ್ಲಸ್ ಮನೆಯ ಫಲಾನುಭವಿಗಳಾಗುತ್ತಿದ್ದಾರೆ ಎಂದು ಸರ್ಕಾರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ದಶಕಗಳ ಹಿಂದೆ ಕೆಲವೆಡೆ ಆಶ್ರಯ ಮನೆಗಳು ಹಂಚಿಕೆಯಾಗುತ್ತಿವೆ. ಆದರೆ, ಅಧಿಕಾರಿಗಳು ನಿಜವಾದ ಬಡ ಫಲಾನುಭವಿಗಳನ್ನು ಗುರುತಿಸಿಲ್ಲ. ಇಲ್ಲಿ ಮದ್ಯವರ್ತಿಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಮನೆಗಳ ಕಾಮಗಾರಿಗಳು ಕಳಪೆಯಾಗುತ್ತಿವೆ. ಹೀಗಾಗಿ ಜಿಲ್ಲಾಡಳಿತ ಮದ್ಯ ಪ್ರವೇಶಿಸಿ, ಸಮೀಕ್ಷೆ ಮಾಡಿ ಬಡವರಿಗೆ ಕಡಿಮೆ ಹಣದಲ್ಲಿ ಮನೆ ನೀಡಬೇಕು ಹಾಗೂ ಮದ್ಯವರ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.