ಬೈಂದೂರು: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾವುಂದ ಸಮೀಪದ ಬಡಾಕೆರೆ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ತಡರಾತ್ರಿ ಕನ್ನ ಹಾಕಿದ ಕಳ್ಳರು ದೇವಸ್ಥಾನದೊಳಗಿನ ಬೆಳ್ಳಿ ಆಭರಣ ಹಾಗೂ ಸಿಸಿಟಿವಿ ಡಿ.ವಿ.ಆರ್ ಹಾಗೂ ಟಿವಿಯನ್ನು ಕದ್ದೊಯ್ದಿದ್ದಾರೆ. ಕಳ್ಳತನವಾದ ವಸ್ತುಗಳ ಒಟ್ಟು ಮೌಲ್ಯ ಅಂದಾಜು ಹತ್ತು ಲಕ್ಷಕ್ಕೂ ಅಧಿಕ ಎನ್ನಲಾಗ್ತಿದೆ. ಫೆಬ್ರವರಿ 21 ರಂದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು ಸಮೀಪದ ಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಕಳ್ಳತನವಾಗಿತ್ತು. ಮಾರನೇ ದಿನ ಆಲೂರು ಮಾರಿಗುಡಿಯಲ್ಲಿ ಖದೀಮರು ಕೈಚಳಕ ತೋರಿಸಿದ್ದರು. ಹೀಗೆ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಪ್ರಕರಣಗಳಿಂದ ಜನರು ಕಂಗಾಲಾಗಿದ್ದಾರೆ.
ಈ ಕುರಿತು ಮಾತನಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕಳೆದ ಒಂದು ವಾರದಲ್ಲಿ ಮೂರ್ನಾಲ್ಕು ಕಳ್ಳತನಗಳು ನಡೆದಿದ್ದು ಇದನ್ನು ನಾವು ಸಹಿಸುವುದಿಲ್ಲ. ದೇವಸ್ಥಾನಗಳಲ್ಲಿ ಇನ್ನು ಒಂದು ದೇವಸ್ಥಾನದಲ್ಲೂ ಕೂಡ ಈ ರೀತಿ ಕೃತ್ಯ ಅಮರಣಾಂತ ಉಪವಾಸ ನಡೆಸುತ್ತೇನೆ. ದೇವಸ್ಥಾನಗಳು ಶ್ರದ್ಧಾಭಕ್ತಿಯ ಕೇಂದ್ರಗಳಾಗಿದ್ದು ಇಂತಹ ಕಳ್ಳತನ ಮೊದಲಾದ ಕೃತ್ಯ ನಡೆದಾಗ ಜನರಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತದೆ. ಸರಣಿ ಕಳ್ಳತನ ಪ್ರಕರಣದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೈಂದೂರು ಪೊಲೀಸರು ಬಡಾಕೆರೆ ದೇವಸ್ಥಾನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.