ತುಮಕೂರು: ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಜಿಲ್ಲಾ ರಾಷ್ಟ್ರೀಯ ನಾಗರಿಕ ವೇದಿಕೆ ವತಿಯಿಂದ ಜನವರಿ 7ರಂದು ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಸಮಾಜದ ಮುಖಂಡ ಕೋರಿ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಇದರಿಂದಾಗಿ ಕಾಯ್ದೆ ಬಗ್ಗೆ ತಪ್ಪು ತಿಳಿಯುವಂತಾಗಿದೆ. ಹೀಗಾಗಿ ಅವರಲ್ಲಿರುವ ತಪ್ಪು ಗ್ರಹಿಕೆ ಹೋಗಲಾಡಿಸಲು ಜನವರಿ 7ರಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಎಲ್ಲ ಸಾರ್ವಜನಿಕರು ಜಾತಿ ಭೇದಭಾವವಿಲ್ಲದೆ ಒಟ್ಟಾಗಿ ಸೇರುವ ಮೂಲಕ ಪೌರತ್ವ ಕಾಯ್ದೆ ಬಗ್ಗೆ ತಿಳಿಯುವ ಜತೆಗೆ ಪೌರತ್ವಕ್ಕೆ ಬೆಂಬಲ ಸೂಚಿಸೋಣ ಎಂದರು.
ಭಾರತ ಸರ್ಕಾರ ಜಾರಿಗೆ ತಂದಿರುವ ಈ ಕಾಯ್ದೆಗೆ ನಾವೆಲ್ಲರೂ ಗೌರವಿಸಬೇಕು ಅದೇ ರೀತಿ ಸರ್ಕಾರಕ್ಕೆ ಬೆಂಬಲವನ್ನು ಸೂಚಿಸುವ ಮೂಲಕ ದೇಶದ ಘನತೆ ಹೆಚ್ಚಿಸೋಣ. ಈ ಸಮಾವೇಶ ಶಾಂತಿಯುತವಾಗಿ ಜರುಗಲಿದೆ. ವಿದ್ಯಾರ್ಥಿಗಳು, ಹಿರಿಯರು ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಬೇಕು ಎಂದರು.
ವೈದ್ಯ ಡಾ. ಪರಮೇಶ್ ಮಾತನಾಡಿ, ಸಿಎಎ ಕಾಯ್ದೆ ಬೆಂಬಲಿಸಿ ದೇಶದಾದ್ಯಂತ ಈಗಾಗಲೇ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಅದೇ ರೀತಿ ತುಮಕೂರಿನಲ್ಲಿ ಜನವರಿ 7ರಂದು ನಡೆಯಲಿದೆ ಎಂದರು.