ರಾಯಚೂರು : ನಗರದ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯಲ್ಲಿ ಇಂದು 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ತರಬೇತಿ ಹಾಗೂ ಘಟಕ ಪರೀಕ್ಷೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕೆಳಮಟ್ಟದಲ್ಲಿದೆ. ತೀವ್ರ ಮುಜುಗರಕ್ಕೀಡಾಗಿದ್ದೇವೆ. ಅದನ್ನು ಹೋಗಲಾಡಿಸಲು ಈ ಬಾರಿ ವಿಶೇಷ ತರಬೇತಿ, ಘಟಕ ಪರೀಕ್ಷೆಗಳು ಹಾಗೂ ಇತರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಗಮನ ಹರಿಸಿ ಆಸಕ್ತಿಯಿಂದ ಓದುವ ಜೊತೆಗೆ ಉತ್ತಮ ಅಂಕಗಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ನಂತರ ಜಿಪಂ ಸಿಇಒ ಲಕ್ಷ್ಮಿಕಾಂತ್ ರೆಡ್ಡಿ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ನಮ್ಮ ಜಿಲ್ಲೆಯ ಫಲಿತಾಂಶ ನೋಡಬೇಕಾದ್ರೆ ಕೆಳಗಿನಿಂದ ಹುಡುಕಾಡಬೇಕಿದೆ. ಯಾದಗಿರಿ ಹೊರತು ಪಡಿಸಿ ಕೊನೆ ಸ್ಥಾನದಲ್ಲಿರುತ್ತೇವೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸಮಾಡಿ ಒಳ್ಳೆಯ ಫಲಿತಾಂಶ ಪಡೆದು ಟಾಪ್ 5 ಜಿಲ್ಲೆಯಲ್ಲಿ ಬರುವಂತೆ ಮಾಡಬೇಕು ಎಂದು ತಿಳಿಸಿದರು.