ಮೈಸೂರು: ಕಸಾಯಿ ಖಾನೆಗೆ ಸಾಗಿಸುತ್ತಿದ್ದ 25ಕ್ಕೂ ಹಸುಗಳನ್ನು ಮಿಂಚಿನ ಕಾರ್ಯಾಚರಣೆ ನಡೆಸಿದ ಜಿಲ್ಲೆಯ ಪೊಲೀಸರು ಅವುಗಳನ್ನ ರಕ್ಷಣೆ ಮಾಡಿದ್ದಾರೆ.
ಅಕ್ರಮವಾಗಿ ಗೋವುಗಳನ್ನು ಸಾಗಾಣೆ ಮಾಡುತ್ತಿದ್ದ ಡ್ರೈವರ್ ಶಫಿಖಾನ್ ಎಂಬಾತನನ್ನ ಕಾರ್ಯಾಚರಣೆ ವೇಳೆ ಪೊಲೀಸರು ಬಂಧಿಸಿದ್ದಾರೆ. ಮಂಡ್ಯದಿಂದ ಮೈಸೂರಿನ ಕಸಾಯಿಖಾನೆಗೆ ಗೋವುಗಳನ್ನು ವಾಹನದಲ್ಲಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದ ತಿ.ನರಸೀಪುರ ಠಾಣೆ ಪೊಲೀಸರು, ತಿ.ನರಸೀಪುರ ತಾಲೂಕಿನ ಕುಪ್ಯ ಚೆಕ್ ಪೋಸ್ಟ್ ಬಳಿ ವಾಹನ ತಡೆದು ಪರಿಶೀಲನೆ ಮಾಡಿದಾಗ, 25ಕ್ಕೂ ಹೆಚ್ಚು ಹಸುಗಳು ಕಂಡು ಬಂದಿವೆ.
ಇವುಗಳ ಮಾಹಿತಿ ಕೇಳಿದಾಗ ಚಾಲಕ ತಡಬಡಾಯಿಸಿದ್ದಾನೆ. ವಾಹನವನ್ನು ವಶಕ್ಕೆ ಪಡೆದು ಮೂಗೂರಿನ ಬಳಿ ಇರುವ ಪಾಂಜರಪೋಲ್ಗೆ ಸುರಕ್ಷಿತವಾಗಿ ಗೋವುಗಳನ್ನು ರವಾನಿಸಲಾಗಿದೆ. ಪಿಎಸ್ಐ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.