ಮೈಸೂರು: ಸಂವಿಧಾನದಲ್ಲಿರುವ ಕಾನೂನಿನಂತೆ ತನಿಖೆ ಮಾಡಿ ಎಂದು ಹೇಳುತ್ತಿದ್ದೇನೆ ಹೊರತು ನಾನು ಹೇಳಿದ ಹಾಗೆ ತನಿಖೆ ಮಾಡಿ ಎಂದು ಹೇಳುತ್ತಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ಗೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಾ.ರಾ.ಮಹೇಶ್ ಹೇಳಿದ ಹಾಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂಬ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಹೇಳಿದ ಹಾಗೆ ತನಿಖೆ ಮಾಡಬೇಡಿ. ಮೆಗಾ ಡೈರಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ. ಇದನ್ನು ಸಂವಿಧಾನದ ಅಡಿ ರೂಪಿತವಾದ ಕಾನೂನಿನ ಮುಖಾಂತರ ತನಿಖೆ ಮಾಡಿ ಎಂದಷ್ಟೇ ಹೇಳಿದ್ದೇನೆ ಹೊರತು ಯಾರನ್ನೂ ಬ್ಲಾಕ್ಮೇಲ್ ಮಾಡಿಲ್ಲ. ಈಗ ನಡೆದಿರುವ ತನಿಖೆ ಸರಿಯಾಗಿಲ್ಲ, ಇದನ್ನು ರದ್ದುಗೊಳಿಸಿ ಎಂದರು.
ಇನ್ನು ಮೆಗಾ ಡೈರಿಯ 165 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದು, ತರಾತುರಿಯಲ್ಲಿ ಪ್ರಕ್ರಿಯೆ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗೇನಾದರೂ ಸಂದರ್ಶನ ಕರೆದು ಹುದ್ದೆ ನೀಡಲು ಮುಂದಾದರೆ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು. ಜೊತೆಗೆ ಈಗ ಆಗಿರುವ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಜಿ.ಟಿ.ದೇವೇಗೌಡ ನಾನು ಸಾ.ರಾ.ಮಹೇಶ್ನಷ್ಟು ಬುದ್ಧಿವಂತ ಅಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಕರೆಕ್ಟ್ ಆಗಿ ಹೇಳಿದ್ದಾರೆ. ಹಾಗಾಗಿ ಕುಮಾರಸ್ವಾಮಿ ನನ್ನನ್ನು ಮಂತ್ರಿ ಮಾಡಿದ್ದು ಎಂದರು. ಇನ್ನು ನ್ಯಾಯ ಸಿಗುವವರೆಗೂ ಮೆಗಾ ಡೈರಿ ಹೋರಾಟ ನಿಲ್ಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಂದು ಆಡಿಯೋ ಸಿಡಿ ಬಿಡುಗಡೆ ಮಾಡುವುದಾಗಿ ಇದೆ ಸಂದರ್ಭದಲ್ಲಿ ಹೇಳಿದರು.