ನಂಜನಗೂಡು: ಸಚಿವ ಸ್ಥಾನ ದೊರೆಯದೇ ಇರುವುದರಿಂದ ಮುನಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಟೀಕಿಸುವ ಬದಲು ರಾಜ್ಯದ ವಾಸ್ತವ ಪರಿಸ್ಥಿತಿ ಅರ್ಥಮಾಡಿಕೊಂಡು ತಾಳ್ಮೆ ವಹಿಸಬೇಕು ಎಂದು ಶಾಸಕ ಬಿ. ಹರ್ಷವರ್ಧನ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಹೆಚ್. ವಿಶ್ವನಾಥ್ ಸೇರಿದಂತೆ 17 ಜನ ಶಾಸಕರ ಕೊಡುಗೆಯಿದೆ. ಪ್ರಸ್ತುತ ಸಂಪುಟ ವಿಸ್ತರಣೆ ವೇಳೆ ಅವರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗದ ಪರಿಸ್ಥಿತಿಯ ಅರಿವು ಅವರಿಗಿರುತ್ತದೆ. ಸಂಪುಟ ವಿಸ್ತರಣೆ ಕುರಿತು ಆಕ್ಷೇಪಣೆಯಿದ್ದಲ್ಲಿ ಪಕ್ಷದ ವರಿಷ್ಠರೊಡನೆ ಮಾತುಕತೆ ನಡೆಸಲಿ. ಅದರ ಹೊರತಾಗಿ ಬಹಿರಂಗವಾಗಿ ಮುಖ್ಯಮಂತ್ರಿಯವರ ಕಾರ್ಯವೈಖರಿಯನ್ನು ಟೀಕೆ ಮಾಡುವುದು ಸರಿಯಲ್ಲ ಎಂದರು.
ಹೆಚ್. ವಿಶ್ವನಾಥ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಹುಣಸೂರಿನಲ್ಲಿ ಬಿಜೆಪಿ ಹೆಚ್ಚು ಶಕ್ತಿಯುತವಾಗಿದೆ. ಅವರ ಪುತ್ರ ಅಮಿತ್ ರಾಜಕೀಯ ಭವಿಷ್ಯವೂ ನಿರ್ಣಾಯಕವಾಗಿರುವುದರಿಂದ ಅವರು ಪಕ್ಷದ ಹಿತಕ್ಕೆ ಧಕ್ಕೆಯಾಗುವಂತಹ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದರು.
ಈ ಸುದ್ದಿಯನ್ನೂ ಓದಿ: ಗಣ ರಾಜ್ಯೋತ್ಸವದ ಮೇಲೆ ಬಿತ್ತಾ ಐಸಿಸ್ ಕರಿ ನೆರಳು!? ಸಿರಿಯಾ ನಂಟು ಹೊಂದಿದ್ದ ಶಂಕಿತ ಉಗ್ರನ ಗುರುತು ಪತ್ತೆ
ಜಿಲ್ಲೆಯ ಹಿರಿಯ ರಾಜಕಾರಣಿಯಾಗಿರುವ ಹೆಚ್ ವಿಶ್ವನಾಥ್ ಅವರು, ಡಿ. ದೇವರಾಜ ಅರಸ್ ಅವರ ಕಾಲದಿಂದಲೂ ರಾಜಕೀಯವಾಗಿ ತಮ್ಮ ಪ್ರಭಾವ ಸಾಬೀತು ಪಡಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರಿಗಿಂತ ಬಹಳ ಚಿಕ್ಕವನಾದ ನಾನು ಅವರಿಗೆ ಸಲಹೆ ನೀಡುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸಂಯಮದಿಂದ ಎದುರಿಸುವಂತೆ ಅವರಿಗೆ ಮನವಿ ಮಾಡುತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.