ಮೈಸೂರು: ನಗರದ ರೇಸ್ ಕ್ಲಬ್ ಲಿಮಿಟೆಡ್ಗೆ ಸ್ಥಳವನ್ನ ಬಿಜೆಪಿ ಸರ್ಕಾರ ನವೀಕರಣ ಮಾಡಿದೆ. ಇದರ ವಿರುದ್ಧವಾಗಿ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಗುಡುಗಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ, ಮೈಸೂರು ರೇಸ್ ಕ್ಲಬ್ ಸ್ಥಳವನ್ನು ನವೀಕರಣ ಮಾಡಬೇಡಿ, ಪಕ್ಕದಲ್ಲಿ ಮೃಗಾಲಯ ಇರುವುದರಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತೆ. ರೇಸ್ಕೋಸ್೯ ಸ್ಥಳಾಂತರ ಮಾಡಿ ಎಂದು ಸೂಚನೆ ಕೊಟ್ಟಿದ್ದೆ. ಆಗ ರೇಸ್ ಕ್ಲಬ್ ಸ್ಥಳಾಂತರ ಮಾಡಲು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಆದರೆ, ಬಿಜೆಪಿ ಸರ್ಕಾರ ಬಂದ ನಂತರ ಮತ್ತೆ ನವೀಕರಣ ಮಾಡಿಸಿಕೊಂಡಿದ್ದಾರೆ. ಅಲ್ಲದೇ ವರ್ಷಕ್ಕೆ ಸರ್ಕಾರ ಶೇ.2ರಷ್ಟು ಆದಾಯ ಕಟ್ಟಿ ಮೋಸ ಮಾಡುತ್ತಿದ್ದಾರೆ. ಇದರ ವಿರುದ್ಧ ವಿಧಾನಸಭೆಯಲ್ಲಿ ಹೋರಾಟ ಮಾಡುವೆ ಎಂದು ಎಚ್ಚರಿಕೆ ನೀಡಿದರು.