ಮೈಸೂರು: ಜಮೀನಿನ ವಿಚಾರಕ್ಕೆ ಇಬ್ಬರು ರೈತರು ಗಲಾಟೆ ಮಾಡಿಕೊಂಡು, ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ರೈತರಾದ ರಘು ಮತ್ತು ಚಂದ್ರಶೇಖರ್ ಎಂಬುವವರು ಜಮೀನಿನ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸಿಕೊಂಡಿದ್ದಾರೆ. ಜೊತೆಗೆ 5ಕ್ಕೂ ಹೆಚ್ಚು ಮಂದಿ ಗಾಯಕೊಂಡಿದ್ದಾರೆ.
ಏನಿದು ಘಟನೆ ? :
ರಘು ಹೆಸರಿನಲ್ಲಿ ಅರ್ಧ ಎಕರೆ ಜಮೀನಿದ್ದು, ಅದನ್ನು ಚಂದ್ರಶೇಖರ್ ಉಳುಮೆ ಮಾಡುತ್ತಿದ್ದರು. ಹಲವಾರು ವರ್ಷಗಳಿಂದ ಚಂದ್ರಶೇಖರ್ ಅನುಭವದಲ್ಲಿದ್ದರು. ರಘು ತನ್ನ ಜಮೀನಿನ ವಿಚಾರವಾಗಿ ಕೋರ್ಟ್ಗೆ ಹೋಗಿದ್ದು , ಕೋರ್ಟ್ ರಘು ಪರ ತೀರ್ಪು ನೀಡಿತ್ತು. ಆದರೆ ಚಂದ್ರಶೇಖರ್ ಕೋರ್ಟ್ ತೆರವುಗೊಳಿಸುವಂತೆ ಆದೇಶ ನೀಡಿರಲಿಲ್ಲ ಎಂದು ಇತರ ರೈತ ಮುಖಂಡರ ಜೊತೆ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಜಮೀನಿನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಚಂದ್ರಶೇಖರ್ ಹಾಗೂ ರಘು ಇಬ್ಬರೂ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದು , ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.