ಮಂಡ್ಯ: ಮೈಶುಗರ್ ಆಡಳಿತ ಮಂಡಳಿಯ ಯಡವಟ್ಟು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಾರ್ಷಿಕ ಸಭೆಯ ವಿಚಾರವೇ ಚರ್ಚೆಗೆ ಕಾರಣವಾಗಿದ್ದು, ವಾರ ಮತ್ತು ದಿನಾಂಕ ಬದಲಾವಣೆ ಕುರಿತು ಟೀಕೆ ಮಾಡಲಾಗುತ್ತಿದೆ.
ಕಂಪನಿಯ ಎಂಡಿ - ಷೇರುದಾರರ ವಾರ್ಷಿಕ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಏರ್ಪಡಿಸಿ ತಿಳಿವಳಿಕೆ ನೋಟಿಸ್ ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 22 - 06 - 2020, ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಭೆ ಎಂದು ತಿಳಿಸಲಾಗಿದೆ. ಆದರೆ ವಾಸ್ತವವಾಗಿ ಅದು ಸೋಮವಾರವಾಗಿದ್ದು, ಯಾಕೆ ಈ ಗೊಂದಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಪ್ರಮುಖವಾಗಿ ಸಭೆಯಲ್ಲಿ 2 ವಿಷಯಗಳ ಚರ್ಚೆಗೆ ಅವಕಾಶ ನೀಡಲಾಗಿದೆ. ಆದರೆ, ದಿನಾಂಕ ಮತ್ತು ವಾರದ ಬದಲಾವಣೆಯಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಷೇರುದಾರರಿಗೆ ಗೊಂದಲ ಮೂಡಿಸಿ ಸಭೆಯನ್ನ ಯಾವುದೇ ಪ್ರಶ್ನೆಗಳು ಇಲ್ಲದೇ ಮುಗಿಸುವ ಹುನ್ನಾರವೇ ಎಂಬ ಅನುಮಾನ ಮೂಡಿದ್ದು, ಇದಕ್ಕೆ ಆಡಳಿತ ಮಂಡಳಿ ಹಾಗೂ ಸರ್ಕಾರವೇ ಉತ್ತರ ನೀಡಬೇಕಾಗಿದೆ.