ಕೋಲಾರ: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಸಿಟಿವಿ ವಿಡಿಯೋಗಳೆಲ್ಲ ಕಟ್ ಅಂಡ್ ಪೇಸ್ಟ್ ಮಾಡಿರುವ ನಕಲಿ ವಿಡಿಯೋಗಳು ಎಂದು ಕೋಲಾರದಲ್ಲಿ ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ವ್ಯಕ್ತಿತ್ವ ಹಿಟ್ ಅಂಡ್ ರನ್ ಇದ್ದಂತೆ. ಬರೀ ಗಾಳಿಯಲ್ಲಿ ಗುಂಡು ಹಾರಿಸುವುದಷ್ಟೇ ಗೊತ್ತು. ಅಲ್ಲದೆ ಮಂಗಳೂರು ಗಲಭೆ ಕುರಿತಾಗಿ ಮಾಜಿ ಸಿಎಂ ಹೆಚ್ಡಿಕೆ ಬಿಡುಗಡೆ ಮಾಡಿರುವ ಸಿಡಿಯಲ್ಲಿರುವ ವಿಡಿಯೋಗಳು ಕಟ್ ಅಂಡ್ ಪೇಸ್ಟ್ ಅಂತಾ ಆರೋಪಿಸಿದರು.
ಕುಮಾರಸ್ವಾಮಿ ಅವರನ್ನ ನಾನು ತುಂಬಾ ಹತ್ತಿರದಿಂದ ನೋಡಿರುವೆ. ಅವರು ಬ್ಲ್ಯಾಕ್ಮೇಲ್ ಮಾಡುವಂತಹ ಸ್ವಭಾವದವರು ಎಂದರು. ಹೀಗಾಗಿ ಅವರ ಮಾತನ್ನು ರಾಜ್ಯದ ಜನತೆ ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ ಎಂದರು. ಸಿಎಎ ಬಂದ ನಂತರ ತಮ್ಮ ಪಕ್ಷದ ಉಳಿವಿಗಾಗಿ ಅಲ್ಪಸಂಖ್ಯಾತರನ್ನ ಓಲೈಕೆ ಮಾಡುವ ನಿಟ್ಟಿನಲ್ಲಿ ಮಂಗಳೂರು ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣವನ್ನ ಕೈಬಿಟ್ಟು ಸಮಾಜದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ರು.