ಕೊಡಗು: ಕೊರೊನಾ ವೈರಸ್ ಹರಡದಂತೆ ಇದುವರಗೆ ದೇಶವನ್ನು ಲಾಕ್ಡೌನ್ ಮಾಡಿದ್ದ ಸರ್ಕಾರ, ಕಾರ್ಮಿಕರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲು ಅವಕಾಶ ನೀಡಿದೆ. ಹೀಗಾಗಿ ಕೊಡಗು ಜಿಲ್ಲೆಗೂ ಹೊರ ರಾಜ್ಯಗಳಿಂದ ಇದುವರೆಗೆ 212 ಜನರು ಬಂದಿದ್ದಾರೆ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ಮಾಹಿತಿ ನೀಡಿದ್ದಾರೆ.
ಇವರೆಲ್ಲರೂ ಸರ್ಕಾರದ ಸೇವಾ ಸಿಂಧು ಆ್ಯಪ್ ಮೂಲಕ ಆನ್ಲೈನ್ ಪಾಸ್ಗೆ ಮನವಿ ಮಾಡಿದ್ದರು. ಅದನ್ನು ಪರಿಶೀಲಿಸಿ ನೀಡಿರುವ ಪಾಸ್ ಪಡೆದು ಕೊಡಗಿಗೆ ಬಂದಿದ್ದಾರೆ. ಇವರೆಲ್ಲರಿಗೂ ಕೊಡಗಿನ ಕುಶಾಲನಗರ, ವಿರಾಜಪೇಟೆ ಮತ್ತು ಕುಶಾಲನಗರಗಳಲ್ಲಿ ಸರ್ಕಾರಿ ಹಾಸ್ಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಅಲ್ಲದೆ ಜಿಲ್ಲೆಯ 13 ಹೋಟೆಲ್ಗಳನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಗುರುತಿಸಲಾಗಿದ್ದು, ಹೋಟೆಲ್ಗಳಲ್ಲಿ ಕ್ವಾರಂಟೈನ್ಗೆ ಒಳಗಾಗುವವರು ಅದರ ವೆಚ್ಚವನ್ನು ಭರಿಸಬೇಕು ಎಂದಿದ್ದಾರೆ. ಸರ್ಕಾರದ ನಿರ್ದೇಶನದಂತೆ ಇವರೆಲ್ಲರಿಗೂ 14ನೇ ದಿನಕ್ಕೆ ಥ್ರೋಟ್ ಸ್ಕ್ವಾಬ್ ಸಂಗ್ರಹಿಸಿ ಟೆಸ್ಟ್ ಮಾಡಿಸಲಾಗುವುದು. ವರದಿಯಲ್ಲಿ ನೆಗೆಟಿವ್ ಬಂದರೆ ಬಳಿಕ ಮನೆಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇನ್ನು ಹೊರ ಜಿಲ್ಲೆಗಳಿಂದ 5,400 ಜನರು ಕೊಡಗು ಜಿಲ್ಲೆಗೆ ಬಂದಿದ್ದು, ಅವರೆಲ್ಲರಿಗೂ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.