ಕಲಬುರಗಿ: ಹಗಲು ಹೋಟೆಲ್ ಉದ್ಯಮ ನಡೆಸಿ ರಾತ್ರಿ ಪ್ರಾಣಿಗಳ ಬೇಟೆಗೆ ಇಳಿಯುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಯದ್ ಉಮರ್, ಮಹಮ್ಮದ್ ಸಾಜಿದ್, ಮೊಹಮ್ಮದ್ ರಾಹಿಲ್, ಮೊಹಮ್ಮದ್ ಶಾಕೀರ್ ಬಂಧಿತರು. ಇವರಿಂದ ಒಂದು ಸ್ಕಾರ್ಪಿಯೋ ವಾಹನ, ಒಂದು ಏರ್ ಗನ್, ಹಾಗೂ ಚಾಕುವನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕಲಬುರಗಿ ತಾಲೂಕು ಅಷ್ಟಗಿ ಗ್ರಾಮದ ಬಳಿ ಪ್ರಾಣಿಗಳ ಬೇಟೆಯಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆದ್ರೆ ಪೊಲೀಸರ ಎಂಟ್ರಿಗೂ ಮುನ್ನವೆ ಆರೋಪಿಗಳು ಏರ್ ಗನ್ ನಿಂದ ಕೃಷ್ಣಮೃಗವನ್ನು ಹೊಡೆದುರುಳಿಸಿದ್ದು, ಪ್ರಾಣಿಗಳನ್ನು ಕೊಂದು ಚರ್ಮ ಹಾಗೂ ಮಾಂಸವನ್ನು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳು ಕಲಬುರಗಿಯಲ್ಲಿ ಹೋಟೆಲ್ ವೊಂದನ್ನು ಹೊಂದಿದ್ದು, ಹಗಲು ಹೋಟೆಲ್ ಉದ್ಯಮ ರಾತ್ರಿ ಪ್ರಾಣಿಗಳ ಬೇಟೆಗೆ ಇಳಿಯುತ್ತಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.