ಹಾಸನ: ಅಪ್ಪನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಬರಲು ಹೋಗಿ ತಾನೇ ಅಪಘಾತಕ್ಕೆ ತುತ್ತಾಗಿ ಮಗ ಸಾವಿಗೀಡಾಗಿದ್ದಾನೆ. ಆದರೆ, ಈತನ ಕುಟುಂಬಸ್ಥರು ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಕೋರನಹಳ್ಳಿ ಗ್ರಾಮದ ಉಮೇಶ್ ಎಂಬುವರ ಸಾವಿನಲ್ಲೂ ಆತನ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಮೇಶ್ ಸೋಮವಾರ ಬೆಳಗಿನಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಏನಿದು ಘಟನೆ.. ಉಮೇಶ್ ತಮ್ಮ ತಂದೆಯನ್ನು ಅನಾರೋಗ್ಯ ಹಿನ್ನೆಲೆ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಿದ ನಂತರ ಮೇ 6ರಂದು ಮನೆಗೆ ಕರೆದೊಯ್ಯಲು ತನ್ನ ಪತ್ನಿ ಮನೆಯಾದ ರಾಜಘಟ್ಟದಿಂದ ಆಸ್ಪತ್ರೆಗೆ ಬರುವ ವೇಳೆ ಹಾಸನದ ರಾಜಘಟ್ಟ ಬೈಪಾಸ್ ರಸ್ತೆಯಲ್ಲಿ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಹಾಸನದ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಪಘಾತದ ತೀವ್ರತೆಗೆ ಮೆದುಳ ನಿಷ್ಕ್ರಿಯಗೊಂಡಿತ್ತು. ಪರಿಣಾಮ ಕುಟುಂಬದವರು ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿ ಆಗಿದ್ದಾರೆ. ಉಮೇಶ್ ದೇಹದಿಂದ ಹೃದಯ, ಕಣ್ಣುಗಳು, ಯಕೃತ್, ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಉಮೇಶ್ ವಯೋವೃದ್ಧ ತಂದೆ-ತಾಯಿ, ಪತ್ನಿ, ಎರಡು ವರ್ಷದ ಹೆಣ್ಣು ಮಗು, ಒಂಭತ್ತು ವರ್ಷದ ಗಂಡು ಮಗು, ಸಹೋದರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅತ್ತ ಮಗ ನನ್ನನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುತ್ತಾನೆ ಎಂದು ಕಾಯುತ್ತಿದ್ದ ಅಪ್ಪ, ಇತ್ತ ತಾನೇ ತೀವ್ರವಾಗಿ ಗಾಯಗೊಂಡು ಉಸಿರುಚೆಲ್ಲಿದ ಮಗ. ಈ ಹೃದಯವಿದ್ರಾವಕ ಘಟನೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಸಂಜೆ ಶ್ರವಣಬೆಳಗೊಳ ಹೊಬಳಿಯ ಕುಂಭೇನಹಳ್ಳಿ ಸಮೀಪದ ಕೊರೇನಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದ ಹಿಂದೂ ವಕೀಲರು!