ಗದಗ : ಆರೋಗ್ಯ ಇಲಾಖೆಯ ಯಡವಟ್ಟಿನಿಂದಾಗಿ ಐದು ತಿಂಗಳ ಮಗು ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ನಡೆದಿದೆ.
ಮಂಜುನಾಥ್ ಚಲವಾದಿ ಮತ್ತು ಲಕ್ಷ್ಮವ್ವ ಚಲವಾದಿ ಎಂಬ ದಂಪತಿಗೆ ಸೇರಿದ ಪೂಜಾ ಎಂಬ ಹೆಣ್ಣು ಮಗು ಸಾವಿಗೀಡಾಗಿದೆ. ಗ್ರಾಮದಲ್ಲಿ ಮಕ್ಕಳಿಗೆ ಚುಚ್ಚುಮದ್ದು ನೀಡಲು ಕ್ಯಾಂಪ್ ಮಾಡಿದ್ದು, ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ ಚುಚ್ಚುಮದ್ದು ನೀಡ್ತಿದ್ದಾರೆ.
ಆದ್ರೆ, ಮಂಜುನಾಥ್ ಚಲವಾದಿಯವರು ಮಗುವಿಗೆ ಜ್ವರ ಬಂದಿದೆ. ಹೀಗಾಗಿ, ಸದ್ಯ ಚುಚ್ಚುಮದ್ದು ಬೇಡ ಎಂದಿದ್ದಾರೆ. ಆದ್ರೂ ಸಹ ಮಂಜುನಾಥ್ ಅವರ ಪತ್ನಿ ಲಕ್ಷ್ಮವ್ವ ಅವರ ಮನವೊಲಿಸಿ ಮಗುವಿಗೆ ಚುಚ್ಚುಮದ್ದು ಹಾಕಿದ್ದಾರೆ.
ಬಳಿಕ ಮಗು ಚುಚ್ಚುಮದ್ದು ಹಾಕಿದ್ದಾಗಿನಿಂದ ಇಡೀ ದಿನ ನೋವು ತಾಳದೆ ಅಳೋದಕ್ಕೆ ಶುರು ಮಾಡಿದೆ. ಮಗುವಿನ ಅಳು ನೋಡೋದಕ್ಕಾಗದೆ ಮಂಜುನಾಥ್ ವೈದ್ಯರಿಗೆ, ನರ್ಸ್ಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆದ್ರೆ, ವೈದ್ಯರು, ನರ್ಸ್ಗಳು ಚುಚ್ಚುಮದ್ದು ನೀಡಿದಾಗ ಮಗು ಅಳೋದು ಕಾಮನ್ ಅಂತಾ ಪೋಷಕರಿಗೆ ಹೇಳಿ ಜಾರಿಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ಮನೆ ಛಿದ್ರ ಛಿದ್ರ-ಗಂಭೀರವಾಗಿ ಗಾಯಗೊಂಡ ದಂಪತಿ!
ಬೆಳಗಿನ ಜಾವ ಮಗು ಮೃತಪಟ್ಟಿದೆ. ಇದರಿಂದ ಮಗು ಕಳೆದುಕೊಂಡ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಗು ಸಾವಿಗೆ ಇವರೇ ಕಾರಣ ಅಂತಾ ಆರೋಪ ಮಾಡಿದ್ದಾರೆ. ಬೇಡ ಅಂದ್ರು ಚುಚ್ಚುಮದ್ದು ನೀಡಿ ಮಗುವಿನ ಸಾವಿಗೆ ಕಾರಣರಾಗಿರೋ ವೈದ್ಯರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.