ಹುಬ್ಬಳ್ಳಿ: ಕೊರೊನಾ ಮಹಾಮಾರಿಗೆ ಎಲ್ಲ ಕ್ಷೇತ್ರಗಳು ತತ್ತರಿಸಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಬಂಜರು ಭೂಮಿ, ಅದರಲ್ಲೂ ಬರದ ಬಿಸಿಲು ನಾಡಿನಲ್ಲಿ ಬೆಳೆ ಬೆಳೆಯುವುದೇ ಕಷ್ಟ. ಆದರೆ, ಛಲದಂಕ ಮಲ್ಲನಂತೆ ಜಿಲ್ಲೆಯ ಪದವೀಧರ ರೈತರೊಬ್ಬರು ಬರದನಾಡಲ್ಲೂ ಗಿಣಿಯಂತೆ ಮಾಗಿಯ ಮಾವು ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ರೈತ ಮಂಜುನಾಥಗೌಡ ಪ್ರಕಾಶಗೌಡ ಪಾಟೀಲ್ ಕೃಷಿಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಮೊದಲೇ ಮಳೆ ಆಶ್ರಿತ ಬೆಳೆಗಳ ಬರದನಾಡಲ್ಲಿ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಹಾಯದೊಂದಿಗೆ ಹನಿ ನೀರಾವರಿ ಮೂಲಕ ಹಚ್ಚ ಹಸಿರುನಿಂದ ಕಂಗೊಳಿಸುವ ಮಾಗಿಯ ಮಾವು ಬೆಳೆದಿದ್ದಾರೆ.
ರೈತ ಮಂಜುನಾಥಗೌಡ ಅವರು ಬಿಎಸ್ಸಿ ಡಿ ಫಾರ್ಮ್ ಪದವೀಧರರಾಗಿ, ಧಾರವಾಡ ಜಿಲ್ಲೆಯ ಆರೋಗ್ಯ ಇಲಾಖೆಯ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ ಫಾರ್ಮಸಿ ಅಧಿಕಾರಿಯಾಗಿದ್ದಾರೆ. ಇವರು ಒಟ್ಟು 5 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಅದರಲ್ಲಿ 3 ಎಕರೆ ಮಾವು ಬೆಳೆದಿದ್ದಾರೆ. ಜಿಲ್ಲೆಯ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಲಹೆಯಿಂದ ಗುಚ್ಛ ಗ್ರಾಮದ ಯೋಜನೆಯಡಿ 620 ಮಾವಿನ ಸಸಿಗಳನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ತರಿಸಿ ನಾಟಿ ಮಾಡಿದ್ದರು. ಈಗ ಮೊದಲ ಇಳುವಳಿ ನಿರೀಕ್ಷೆಯಲ್ಲಿದ್ದಾರೆ.
ಕಳೆದ 4 ವರ್ಷಗಳಿಂದ ಮಾವು ಬೆಳೆಯುತ್ತಿರುವ ಇವರು ಕೇಸರ್ ಮತ್ತು ಆಪಸ್ ಎಂಬ ತಳಿಯ ಮಾವು ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆಯಿಂದ 1 ಗಿಡಕ್ಕೆ 40 ರೂ ಸಹಾಯ ಧನದಿಂದ ಈ ಬೆಳ ಬೆಳೆಯಲಾರಂಭಿಸಿದ್ದಾರೆ. 3 ಎಕರೆಯಲ್ಲಿ ಒಟ್ಟು 620 ಮಾವಿನ ಸಸಿಗಳ ನಾಟಿಮಾಡಿ ಈಗ ಮೊದಲ ಫಸಲು ಪಡೆಯುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಸುಮಾರು 6-7 ಲಕ್ಷ ರೂ. ಖರ್ಚಾಗಿದೆ. ಕೊರೊನಾ ನಡುವೆ ಉತ್ತಮ ಫಸಲು ತೆಗೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಮಂಜುನಾಥಗೌಡ ಪಾಟೀಲ್.