ದಾವಣಗೆರೆ: ಗಾಂಜಿ ವೀರಪ್ಪ ಕುಟುಂಬದಿಂದ ಪಡೆದ ಜಮೀನಿನಲ್ಲಿ ಸಾರ್ವಜನಿಕ ರಸ್ತೆ, ಉದ್ಯಾನಕ್ಕೆ ಬಿಟ್ಟ ಜಾಗವನ್ನು ಒತ್ತುವರಿ ಮಾಡಿಕೊಂಡು ಎಸ್. ಎಸ್ ಮಾಲ್ ಕಟ್ಟಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ಎಸ್. ಎಸ್ ಗಣೇಶ್ ಹೆಸರಿಗೆ ಪೂರ್ತಿ ಜಾಗವನ್ನು ಏಕ ನಿವೇಶನವಾಗಿ ಪರಿವರ್ತಿಸಿ ಅನುಮತಿ ನೀಡಲಾಗಿದೆ. ಈ ಸಂಬಂಧ ನಿಯಮ ಉಲ್ಲಂಘಿಸಿರುವ ಹಿಂದಿನ ದೂಡಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಮತ್ತೊಮ್ಮೆ ದೂಡಾ ಸಭೆ ನಡೆಸಿ ಕಾನೂನು ಪ್ರಕಾರ ತೆರವುಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು. ನಗರದ ಬಳಿ ಬಾತಿ ಕೆರೆ ಸರ್ವೇ ನಡೆಸಿದಾಗ ನಾಲ್ಕು ಎಕರೆ ಎರಡು ಗುಂಟೆ ಜಮೀನಿನ ವಸತಿ ವಿನ್ಯಾಸ ರದ್ದುಪಡಿಸಿ ಜಾಗವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದ್ದಾರೆ.
ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರಿ ಜಾಗ ಸೇರಿದಂತೆ ಇತರ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರೆ ಮುಲಾಜಿಲ್ಲದೇ ಕಾನೂನಿನ ಪ್ರಕಾರ ವಶಕ್ಕೆ ಪಡೆಯಲಾಗುವುದು. ಯಾರೇ ತಪ್ಪು ಮಾಡಿದ್ದರೂ ಕ್ರಮ ಖಚಿತ. ಯಾವ ಪಕ್ಷದ ಪ್ರಭಾವಿಗಳಿದ್ದರೂ ಬಿಡುವುದಿಲ್ಲ. ಕಾಂಗ್ರೆಸ್ ಮುಖಂಡರು ಬಿಜೆಪಿಯವರು ಸ್ಮಾರ್ಟ್ ಸಿಟಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಹತ್ತು ಪರ್ಸೆಂಟ್ ಕಮೀಷನ್ ಪಡೆಯುತ್ತಾರೆ ಎಂಬ ಆರೋಪ ಮಾಡಿದ್ದರು. ಈಗ ದಾಖಲೆ ಸಮೇತ ಒತ್ತುವರಿಯಾಗಿರುವುದು ಗೊತ್ತಾಗಿದೆ. ಹಿಂದೆ ಕಾಂಗ್ರೆಸ್ನವರು ಮಾಡಿರುವ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ ಅವರು, ಏನೇ ಆರೋಪ ಮಾಡಿದರೂ ದಾಖಲೆ ಸಮೇತವಾಗಿ ಸಾಬೀತುಪಡಿಸಲಿ. ಈ ಹಿಂದೆ ಇದ್ದ ದೂಡಾ ಅಧಿಕಾರಿಗಳ ಸಹಕಾರದಿಂದ ಭಾರಿ ಅಕ್ರಮಗಳು ನಡೆದಿವೆ. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ ಎಂದರು.