ದಾವಣಗೆರೆ : 'ಶ್ರೀನಿವಾಸ್ ಎಲ್ಲಿದ್ದೀಯಪ್ಪಾ' ಎಂದವರ ವಿರುದ್ದ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಕೆಂಡಾಮಂಡಲವಾಗಿ ಜನಕ್ಕೆ ತಲೆಕೆಟ್ಟಿರಬೇಕು ಎಂದು ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಆರ್ ಶ್ರೀನಿವಾಸ್ ಕಳೆದ ಮೂರು ತಿಂಗಳಿನಿಂದ ದಾವಣಗೆರೆಯತ್ತ ಮುಖ ಮಾಡಿರಲಿಲ್ಲ.ಇತ್ತ ಜಗಳೂರು ಸೇರಿದಂತೆ ವಿವಿಧ ತಾಲೂ ಕಿನಲ್ಲಿ ಬರ ತಾಂಡವ ಆಡುತ್ತಿದ್ದು, ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಆದರೆ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಶ್ರೀನಿವಾಸ್ ಮೂರು ತಿಂಗಳಿಂದ ದಾವಣಗೆರೆಯತ್ತ ಸುಳಿದಿರಲಿಲ್ಲ. ಯಾವುದೇ ಅಧಿಕಾರಿಗಳ ಸಭೆ ನಡೆಸದೇ ನಿರ್ಲಕ್ಷ್ಯ ವಹಿಸಿದ್ದರು, ಈ ಆರೋಪ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದಾವಣಗೆರೆ ಜನ 'ಶ್ರೀನಿವಾಸ್ ಎಲ್ಲಿದ್ದೀಯಪ್ಪಾ' ಎಂಬ ಅಭಿಯಾನ ಶುರುವಿಟ್ಟುಕೊಂಡಿದ್ದರು.
ಗರಂ ಆದ ಶ್ರೀನಿವಾಸ್: 'ಶ್ರೀನಿವಾಸ್ ಎಲ್ಲಿದ್ದೀಯಪ್ಪಾ' ಎಂಬ ಅಭಿಯಾನ ಶುರುವಾದ ಮೂರು ದಿನದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರ ಪರಿಸ್ಥಿತಿ ಸಭೆ ಏರ್ಪಡಿಸಿದ್ದರು. ಈ ವೇಳೆ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಕೆಂಡಾಮಂಡಲವಾದರು.
ಜಿಲ್ಲೆಗೆ ಸಚಿವ ಸ್ಥಾನ ಬೇಡ ಅಂದವರು ಯಾರು? ಬದಲಿಸಿಕೊಳ್ಳಿ. ನಾನು ಜಿಲ್ಲೆಗೆ ಬಂದಿಲ್ಲ ಎನ್ನುವ ಜನಕ್ಕೆ ತಲೆ ಕೆಟ್ಟಿರಬೇಕು ಎಂದು ಕಿಡಿಕಾರಿದರು. ವಿರೋಧಿಸುವವರು ಇದ್ದೇ ಇರುತ್ತಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ ನೀತಿ ಸಂಹಿತೆ ಇರುವ ಕಾರಣ ದಾವಣಗೆರೆಗೆ ಆಗಮಿಸಿರಲಿಲ್ಲ ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡರು.