ದಾವಣಗೆರೆ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಕ್ಷಿಸಿದ ಎಎಸ್ಐ ವೆಂಕಟೇಶ್ ರೆಡ್ಡಿ ಪುತ್ರ ಸುಶಾಂತ್ ರೆಡ್ಡಿ ಹಾಗೂ ಪುತ್ರಿ ಪ್ರಣೀತಾ ಅವರನ್ನು ನಗರದ ಕುವೆಂಪು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ನಡೆದ ‘ಚಿಗುರು’ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆತ್ಮಹತ್ಯೆಯಿಂದ ಮಹಿಳೆಯನ್ನು ರಕ್ಷಿಸಿದ ಪುಟಾಣಿಗಳಾದ ಸುಶಾಂತ್ ರೆಡ್ಡಿ ಹಾಗೂ ಪ್ರಣೀತ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಪ್ರತಿ ವರ್ಷ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ನಡೆಯುತ್ತಿದ್ದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ವೇದಿಕೆ ಸಿಗುತ್ತಿತ್ತು. ಈ ವರ್ಷ ಕೊರೊನಾ ಪಿಡುಗಿನಿಂದ ಮಕ್ಕಳು ತಮ್ಮ ಪ್ರತಿಭೆ ವ್ಯಕ್ತಪಡಿಸಲು ಅವಕಾಶವಿಲ್ಲದಂತಾಗಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಚಿಗುರು’ ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಕ್ಕಳಿಗೆ ವೇದಿಕೆ ಸಿಕ್ಕಂತಾಗಿದೆ ಎಂದು ಹೇಳಿದರು.


ಪ್ರತಿ ಮಕ್ಕಳಲ್ಲೂ ವಿಶೇಷತೆ ಇರುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅಂತಹ ಪ್ರತಿಭೆಗಳನ್ನ ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಅಂತಹ ಮಕ್ಕಳು ಸಮಾಜದ ಸ್ವತ್ತಾಗುತ್ತಾರೆ. ಅದಕ್ಕಾಗಿ ಇಂತಹ ವೇದಿಕೆಗಳು ಬೇಕು. ಇಂತಹ ಕಾರ್ಯಕ್ರಮಗಳು ನಮ್ಮ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಆಗಲಿ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟಿವಿ ವಾಹಿನಿಗಳಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ಅದ್ಭುತ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ. ನಮ್ಮ ಹಳ್ಳಿಗಾಡಿನ ಮಕ್ಕಳಿಗೂ ಚಿಗುರುನಂತಹ ವೇದಿಕೆಗಳು ಉತ್ತಮ ಅವಕಾಶ ದೊರಕಿಸಿಕೊಡಲಿ, ಅದರೊಂದಿಗೆ ನಮ್ಮ ಜನಪದ ಕಲಾ ಪ್ರಕಾರಗಳು ಉಳಿಯಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಚಿಗುರು ಎಂದರೆ ಪ್ರತಿಭೆ ಗುರುತಿಸುವುದು. ದಾವಣಗೆರೆ ಹೆಸರಾಂತ ನಾಟಕಕಾರರು, ಕಲಾವಿದರ ತವರೂರು. ಇಂತಹ ಕಾರ್ಯಕ್ರಮಗಳನ್ನು ಒಂದು ದಿನ ಮಾಡಿದರೆ ಸಾಲದು, ಕನಿಷ್ಠ ಮೂರು ದಿನಗಳ ಕಾಲ ಇಂತಹ ಕಾರ್ಯಕ್ರಮ ಮಾಡಿದರೆ ಎಲ್ಲರಿಗೂ ಅವಕಾಶ ಸಿಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಟಕ ಅಕಾಡೆಮಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದರು.