ಪುತ್ತೂರು : ತಾಲೂಕಿನ ಮುಂಡೂರಿನ ಕೃಷಿಕರೊಬ್ಬರು ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೃಷಿಕ ಮುರಳೀಧರ್ ಭಟ್ ಬಂಗಾರಡ್ಕ, ಕೃಷಿತೋಟದ 25 ಸೆಂಟ್ಸ್ ಜಾಗದಲ್ಲಿ ಮಳೆ ನೀರನ್ನು ಸಂಗ್ರಹಿಸಲೆಂದೇ ಬೃಹತ್ ಗುಂಡಿ ನಿರ್ಮಿಸಿದ್ದಾರೆ. 25 ಅಡಿ ಆಳ, 145 ಅಡಿ ಉದ್ದ ಹಾಗೂ 72 ಅಡಿ ಅಗಲದ ಗುಂಡಿಯಲ್ಲಿ ಮಳೆ ನೀರನ್ನು ಸಂಗ್ರಹಿಸುತ್ತಿದ್ದಾರೆ.
ಪ್ರತಿ ವರ್ಷ 50 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಈ ಗುಂಡಿಗಿದೆ. ಇದನ್ನು ನಿರ್ಮಿಸಲು ಸುಮಾರು 5 ಲಕ್ಷ ರೂ. ವ್ಯಯಿಸಿದ್ದಾರೆ. ತಮ್ಮ 5 ಎಕರೆ ಕೃಷಿ ಭೂಮಿಗೆ ಬೇಸಿಗೆಯಲ್ಲಿ ಬರಪೂರ ನೀರು ಪೂರೈಕೆ ಮಾಡಲು ಈ ಗುಂಡಿಯಿಂದ ಸಾಧ್ಯವಿದೆ.
ಇದರಿಂದಾಗಿ ಕೃಷಿ ಭೂಮಿಗೆ ಕೊಳವೆ ಬಾವಿಗಳನ್ನು ಬಳಸುವ ಪ್ರಮಾಣವೂ ಗಣನೀಯವಾಗಿ ಕುಸಿದಿದೆ. ಬಂಗಾರಡ್ಕರ ಈ ಮಳೆ ನೀರು ಗುಂಡಿ ಜಿಲ್ಲೆಯಾದ್ಯಂತಹ ಸುದ್ದಿ ಮಾಡಿದ್ದು, ಹೆಚ್ಚಿನ ತೋಟಗಳಲ್ಲಿ ಇದೇ ರೀತಿಯ ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ ರಾಜ್ಯದ ಹಲವು ಕಡೆಗಳಿಂದಲೂ ಈ ಮಳೆ ಗುಂಡಿಯನ್ನು ವೀಕ್ಷಿಸಲು ಕೃಷಿಕರು ಬರುತ್ತಿದ್ದಾರಂತೆ.