ಚಿಕ್ಕಮಗಳೂರು: ಲವ್ ಜಿಹಾದ್ ಕಾನೂನು ಬರಲೇಬೇಕು, ಬರುತ್ತದೆ. ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಇದನ್ನು ತಡೆಯಲು ಆಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಬಾ ಜನ ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಯ ಹೆಸರಿನಲ್ಲಿ ಮದುವೆಯಾಗಿ ನಂತರ ತಲಾಖ್ ನೀಡಿದ್ದಾರೆ. ಮಕ್ಕಳಾದ ಮೇಲೆ ಮಕ್ಕಳು ಹಾಗೂ ಹೆಂಡತಿಯನ್ನು ರಸ್ತೆಗೆ ಬಿಟ್ಟಿದ್ದಾರೆ. ಇಂತಹ ಹಲವು ಉದಾಹರಣೆಗಳು ಕರಾವಳಿ, ಬೆಂಗಳೂರು, ಮೈಸೂರುನಲ್ಲಿಯೂ ಇವೆ ಎಂದರು.
ವೋಟ್ ಬ್ಯಾಂಕ್ ಓಲೈಕೆಗಾಗಿ ಅಲ್ಪಸಂಖ್ಯಾತರನ್ನು ಓಲೈಸುವಂತಹ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ಹೊಸದಲ್ಲ, ಹಿಂದೆಯೂ ಮಾಡಿದ್ದರು. ಗೋ ಹತ್ಯೆ ನಿಷೇಧ ಕಾನೂನು ಬರಲೇಬೇಕು, ಬಂದೇ ಬರುತ್ತದೆ. ಸಿದ್ದರಾಮಯ್ಯನವರು ಲವ್ ಜಿಹಾದ್ ಏನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಹಿಂದೂ ಹೆಣ್ಣು ಮಕ್ಕಳಿಗೆ ಎಷ್ಟು ಅನ್ಯಾಯವಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಲವ್ ಜಿಹಾದ್ ಮತಾಂತರದ ಒಂದು ಷಡ್ಯಂತ್ರ ಹಾಗೂ ದೇಶಾಂತರದ ಷಡ್ಯಂತ್ರ. ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ ಕಾಯ್ದೆ ತರುವುದನ್ನು ನಿಲ್ಲಿಸಲು ಆಗುವುದಿಲ್ಲ ಎಂದರು.