ಚಾಮರಾಜನಗರ: ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರು ಮೈತ್ರಿ ಧರ್ಮ ಪಾಲನೆ ಮಾಡಿ ಮಾತುಕತೆಯಂತೆ ಆಣೆ ಪ್ರಮಾಣ ಮಾಡಿರುವ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹನೂರು ತಾಲೂಕಿನ ಕಣ್ಣೂರು ಗ್ರಾಪಂನ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮೈತ್ರಿ ಮಾಡಿಕೊಂಡು ಧರ್ಮಸ್ಥಳದಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಲು ಆಣೆ - ಪ್ರಮಾಣ ಮಾಡಿಕೊಂಡಿದ್ದಾರೆ. ಕಣ್ಣೂರು ಗ್ರಾಪಂನಲ್ಲಿ 15 ಸದಸ್ಯ ಬಲವಿದ್ದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ 3 ಪಕ್ಷಗಳ ತಲಾ 5 ಬೆಂಬಲಿತರು ಗೆದ್ದಿದ್ದರು. ಅಧಿಕಾರ ಹಿಡಿಯಲು ಯಾವುದಾದರೂ 2 ಪಕ್ಷಗಳು ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಆದ ಹಿನ್ನೆಲೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಗೆ ಸಿದ್ಧವಾಗಿ 2 ಪಕ್ಷಗಳ ಸದಸ್ಯರು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಹೋಗಿದ್ದರು ಎನ್ನಲಾಗಿದೆ.
ಈ ವೇಳೆ, ಕೆಲ ಸದಸ್ಯರು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಮುಂಭಾಗ ಕರ್ಪೂರ ಹಚ್ಚಿ ನಾವೆಲ್ಲಾ ಆಡಿದ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಣ್ಣೂರು ಬಸವರಾಜಪ್ಪ ಮಾತನಾಡಿ, ಮೊದಲ 10 ತಿಂಗಳ ಅವಧಿಗೆ ಬಸವರಾಜು, ಮುಂದಿನ 12 ತಿಂಗಳು ಮಮತಾರಾಣಿ ಮತ್ತು ಉಳಿದ 8 ತಿಂಗಳಿಗೆ ಶಬಾನ ಖಾನ್ ಅವರು ಅಧ್ಯಕ್ಷರಾಗಲಿದ್ದಾರೆ. ಏನೇ ಆದರೂ ನಾವೆಲ್ಲಾ 50-50 ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಓದಿ : ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!
ಇದೇ ವೇಳೆ, ಮತ್ತೊರ್ವ ಮುಖಂಡ ಫೈರೋಜ್ ಮಾತನಾಡಿ 5 ವರ್ಷ ಈಗ ಹೇಗಿದ್ದೇವೆ ಹಾಗೆಯೇ ಇರಬೇಕು, ಯಾರಾದರು ಒಬ್ಬರು ಹೆಚ್ಚು ಕಡಿಮೆ ಮಾಡಿದರೆ ಅವರ ಮನೆ ಮುರಿದುಹೋಗುತ್ತದೆ ಎಂದು ಎಚ್ಚರಿಸಿದ್ದಾರೆ. ಈ 2 ವಿಡಿಯೋಗಳು ಸದ್ಯ ಹನೂರು ಭಾಗದಲ್ಲಿ ಸಖತ್ ಸದ್ದು ಮಾಡಿವೆ.