ಹೊಸಪೇಟೆ (ವಿಜಯನಗರ): ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು ವಿಜಯನಗರ ಜಿಲ್ಲೆಯ ಹೆಚ್ಚುವರಿ ಪ್ರಭಾರಿಯಾಗಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ ಅವರು ರಾಜ್ಯಪಾಲರ ಅನುಮತಿ ಮೇರೆಗೆ ಆದೇಶ ಹೊರಡಿಸಿದ್ದಾರೆ.
ಫೆ. 8ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳನ್ನು ಬೇರ್ಪಡಿಸಿ ನೂತನ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ. ವಿಜಯನಗರ ಜಿಲ್ಲಾಮಟ್ಟದ ಕಾರ್ಯಾಲಯಗಳನ್ನು ಆರಂಭಿಸಬೇಕಾಗಿರುವುದರಿಂದ ನೂತನ ಜಿಲ್ಲೆಗೆ ಸರ್ಕಾರದಿಂದ ಜಿಲ್ಲಾ ಮಟ್ಟದ ಹುದ್ದೆಗಳನ್ನು ಭರ್ತಿ ಮಾಡಲು ಕಾಲಾವಕಾಶ ಬೇಕಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಓದಿ:371(ಜೆ)ಗೆ ನೂತನ ವಿಜಯನಗರ ಜಿಲ್ಲೆ ಸೇರ್ಪಡೆ: ಸಂತಸ ವ್ಯಕ್ತಪಡಿಸಿದ ಸಚಿವ ಆನಂದ್ ಸಿಂಗ್
ನೂತನ ಜಿಲ್ಲೆಯ ಪೂರ್ವಸಿದ್ಧತೆಗಾಗಿ ಬಳ್ಳಾರಿ ಜಿಲ್ಲೆಯಿಂದ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೂತನ ವಿಜಯನಗರ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳ ಹುದ್ದೆಗಳ ಹೆಚ್ಚುವರಿ ಪ್ರಭಾರವನ್ನು ತಾತ್ಕಾಲಿಕವಾಗಿ ವಹಿಸುವುದು ಮತ್ತು ಇದರಿಂದ ಕಾರ್ಯಾಲಯಗಳ ಕಾರ್ಯಾರಂಭ ಮಾಡಲು ಅನುಕೂಲವಾಗುತ್ತದೆ. ಆದುದರಿಂದ ನೂತನ ವಿಜಯನಗರ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹೆಚ್ಚುವರಿ ಪ್ರಭಾರವನ್ನು ಫೆ. 8ರಿಂದ ಪೂರ್ವನ್ವಯವಾಗಿ ವಹಿಸುವಂತೆ ಆದೇಶ ಹೊರಡಿಸಿದ್ದಾರೆ.