ಹೊಸಪೇಟೆ (ಬಳ್ಳಾರಿ): ತಾಲೂಕಿನ ಸೀತಾರಾಮ ತಾಂಡದಲ್ಲಿ 8 ಡೆಂಘೀ ಪ್ರಕರಣ ಪತ್ತೆಯಾಗಿವೆ. ಒಂದು ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಡಿ ಭಾಸ್ಕರ್ ಅವರು ಹೇಳಿದ್ದಾರೆ.
ನಗರದ ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ಈಟಿವಿ ಭಾರದೊಂದಿಗೆ ಮಾತನಾಡಿದ ಅವರು, ಈ ಮುಂಚೆ ಜ್ವರದ ಪ್ರಕರಣ ಕಂಡು ಬಂದಿದ್ದವು. ಜನರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇವರ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆಗೊಳಪಡಿಸಿದಾಗ ಡೆಂಘೀ ಎಂಬುದು ದೃಢಪಟ್ಟಿದೆ ಎಂದಿದ್ದಾರೆ.
ಓದಿ:ಹೊಸಪೇಟೆ: ಜ್ವರಬಾಧೆಯಿಂದ ಆತಂಕದಲ್ಲಿ ಸೀತಾರಾಮ ತಾಂಡ ಜನತೆ
ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನೀರಿನ ಟ್ಯಾಂಕ್ನ ಸ್ವಚ್ಛಗೊಳಿಸುವುದು. ಅಲ್ಲದೇ ನೀರು ಸೋರಿಕೆ ಕಂಡು ಬಂದ್ರೆ ಅದನ್ನು ಸರಿಪಡಿಸುವುದು.
ಜತೆಗೆ ಆರೋಗ್ಯ ಇಲಾಖೆಯಿಂದ ಫೀವರ್ ಕ್ಲಿನಿಕ್ ನಡೆಸಲಾಗುತ್ತಿದೆ. 30 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 5 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.