ಅಥಣಿ: ಬಾಲಕನ ಅಪಹರಣಕ್ಕೆ ಯತ್ನಿಸಿದ ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಮುಗಳಕೋಡ ಗ್ರಾಮದ ಏಳು ವರ್ಷದ ಬಾಲಕನಿಗೆ ಮದ್ಯ ಕುಡಿಸಿ, ಆತನನ್ನು 30 ಕಿಲೋಮೀಟರ್ ದೂರದ ಅಥಣಿ ಪಟ್ಟಣಕ್ಕೆ ಕರೆತಂದಿದ್ದರು. ಈ ವೇಳೆ ಖದೀಮರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಯಾವ ಉದ್ದೇಶಕ್ಕಾಗಿ ಬಾಲಕನ ಅಪಹರಣಕ್ಕೆ ಯತ್ನಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.
ಬಾಲಕನ ಅಸ್ವಸ್ಥತೆ ಹಾಗೂ ಆರೋಪಿಗಳ ಚಲನವಲನಗಳನ್ನು ಗಮನಿಸಿದ ಜನರು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ವಿಷ್ಣಪ್ಪ ಹತ್ತಿಹಾಳ ಹಾಗೂ ಕಲಬುರಗಿ ಮೂಲದ ವಿಶ್ವನಾಥ ಪಾಟೀಲ್ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನೂ ಸಾರ್ವಜನಿಕರೇ ಅಥಣಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಅಸ್ವಸ್ಥನಾಗಿದ್ದ ಬಾಲಕನನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.