ಬೆಂಗಳೂರು: ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ ಬಾಲಕಿ ಆರತಿ ಕಿರಣ್ ಶೇಠ್ಗೆ ಮಾಜಿ ಸಚಿವ ಆರ್.ವಿ ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ತನ್ನ ಸಹೋದರನ ರಕ್ಷಣೆಗಾಗಿ ತನ್ನ ಪ್ರಾಣವನ್ನು ಲೆಕ್ಕಿಸದೇ ಗೂಳಿಯೊಂದಿಗೆ ಹೋರಾಟ ಮಾಡಿ ಸಹೋದರ ಕಾರ್ತಿಕ್ ಶೇಠ್ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಳು. ಈ ಸಾಹಸ ಕಾರ್ಯಕ್ಕೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಈ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆ ಮತ್ತು ತನ್ನ ಹೆತ್ತವರಿಗೆ ಹೆಸರು ತಂದು ಕೊಟ್ಟಿದ್ದಾಳೆ. ಈಗಾಗಲೇ ಆರತಿಯ ಶೌರ್ಯಕ್ಕೆ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ, ಸನ್ಮಾನ ಮಾಡಿವೆ. ಆರತಿಯ ಮುಂದಿನ ಶೈಕ್ಷಣಿಕ ಜೀವನವು ಉತ್ತಮವಾಗಿರಲಿ, ಇನ್ನೂ ಉನ್ನತ ಹಂತಕ್ಕೆ ಬೆಳೆಯಲಿ ಎಂದು ಅವರು ಆಶಿಸಿದ್ದಾರೆ. ತಾನು ಕಲಿಯುತ್ತಿರುವ ಶಾಲೆ, ಪೋಷಕರಿಗೆ, ಜಿಲ್ಲೆ, ರಾಜ್ಯಕ್ಕೆ ಹೆಸರು ತರುವಂತಾಗಲಿ ಎಂದು ನಾನು ಹಾರೈಸುತ್ತೇನೆ. ಜೊತೆಗೆ ಆರತಿಯ ಸಾಹಸವು ಇತರರಿಗೆ ಮಾದರಿಯಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.