ಬೆಂಗಳೂರು: ದ್ರೌಪದಿ ಕರಗ ಅಥವಾ ಬೆಂಗಳೂರು ಕರಗ ಬೆಂಗಳೂರಿನ ಚಾರಿತ್ರಿಕ ಹಾಗೂ ಸಾಂಸ್ಕಂತಿಕ ಹಬ್ಬ. ಚೈತ್ರ ಪೂರ್ಣಿಮಾ ದಿನದಂದು ನಡೆಯುವ ಕರಗ ಉತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಕರಗ ತನ್ನದೇ ಆದ ಧಾರ್ಮಿಕ ಹಿನ್ನೆಲೆ, ಪಾವಿತ್ರ್ಯತೆ ಹೊಂದಿದೆ. 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದ್ದು, ಈಗಾಗಲೇ ತಯಾರಿಗಳು ನಡೆದಿವೆ. ನಾಳೆಯಿಂದ ಶುರುವಾಗುವ ಬೆಂಗಳೂರು ಕರಗ ಪ್ರಕ್ರಿಯೆ ಏಪ್ರಿಲ್ 21ರವರೆಗೆ ನಡೆಯಲಿದೆ. ಈ ಬಾರಿ ಕರಗದ ಪೂಜಾರಿಯಾಗಿ ಮನು ನಾಗರಾಜ್ ಅವರನ್ನ ಸರ್ಕಾರ ಆಯ್ಕೆ ಮಾಡಿದೆ.
ನಾಳೆ ರಾತ್ರಿ ದೇವರ ರಥೋತ್ಸವ ಮತ್ತು ಅದೇ ದಿನ ಬೆಳಗಿನ ಜಾವ 4 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದೆ. ಈ 11 ದಿನಗಳಲ್ಲಿ ಪ್ರತಿ ದಿನ ಸಂಜೆ 7:30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ದಿನಾಂಕ 19ರಂದು ಕರಗ ಶಕ್ತ್ಯೋತ್ಸವ ನಡೆಯಲಿದೆ.
ನಾಳೆಯ ಕಾರ್ಯಕ್ಕಾಗಿ ಈಗಾಗಲೇ ತಿರಳಪೇಟೆಯಲ್ಲಿರುವ ಧರ್ಮರಾಯ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ರಸ್ತೆಯ ಉದ್ದಕ್ಕೂ ವಿದ್ಯುತ್ ದೀಪಾಲಂಕರ ಮಾಡಲಾಗುತ್ತಿದೆ.
ಬೆಂಗಳೂರು ಕರಗ ಹಿನ್ನೆಲೆ:
ದ್ವಾಪರ ಯುಗದಲ್ಲಿ ರಾಕ್ಷಸರ ಪಡೆಗಳನ್ನು ಸದೆಬಡಿಯಲು ದ್ರೌಪದಿ ಜನ್ಮ ತಾಳಿದ್ದಳು ಎಂಬುದು ಇಲ್ಲಿನ ನಂಬಿಕೆ. ಆದರೆ ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗ ಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗ ತಿಮಿರಾಸುರ ಅನ್ನೋ ರಾಕ್ಷಸ ಮಾತ್ರ ಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನ ಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿ ತಿಮಿರಾಸುರನನ್ನು ಸಂಹರಿಸುತ್ತಾಳೆ ಅನ್ನೋ ಪ್ರತೀತಿ ಇದೆ.