ಬೆಂಗಳೂರು: ಕೆಲಸ ಇಲ್ಲದೆ ಮಹಾರಾಷ್ಟ್ರದಿಂದ, ರಾಜ್ಯಕ್ಕೆ ನಡೆದುಕೊಂಡು ವಾಪಸಾಗುತ್ತಿದ್ದ ಕನ್ನಡಿಗರನ್ನು ಮಹಾರಾಷ್ಟ್ರದ ಕೀಣಿ ಚೆಕ್ ಪೋಸ್ಟ್ ಬಳಿ ಕೋಲಾಪುರ ಜಿಲ್ಲೆಯ ವಡಂಗಾವ್ ಪೊಲೀಸರು ಬಂಧಿಸಿದ್ದಾರೆ.
ಬಳಿಕ ಅಲ್ಲಿಂದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷಿಸುವುದಾಗಿ ಹೇಳಿ ಕೂಡಿ ಹಾಕಿದ್ದಾರೆ. ಆದರೆ 3 ದಿನ ಆದ್ರೂ ಒಬ್ಬ ವೈದ್ಯರೂ ಅತ್ತ ಸುಳಿದಿಲ್ಲ. ಊಟ ತಿಂಡಿ, ಬಟ್ಟೆ ಇಲ್ಲದೆ ಸಾಕಷ್ಟು ಹಿಂಸೆ ಆಗ್ತಿದೆ. ಒಂದು ಕೋಣೆಯಲ್ಲಿ 15 ಜನ ಇದ್ದೇವೆ. ಒಬ್ರಿಗೆ ಕೊರೊನಾ ಬಂದ್ರೂ ಎಲ್ರೂ ಸತ್ತೋಗ್ತೇವೆ ಎಂದು ಭೀತಿಯಲ್ಲಿ ಕಾರ್ಮಿಕರು ಅಳಲುತೋಡಿಕೊಂಡಿದ್ದಾರೆ.
ದಯವಿಟ್ಟು ಪಾರು ಮಾಡಿ ಎಂದು ಕಣ್ಣೀರು ಹಾಕಿ ಮಹಿಳೆ ಕೈ ಮುಗಿದು ಕೇಳಿಕೊಂಡಿದ್ದಾರೆ. ಮೂಲತಃ ಮಂಡ್ಯ, ಹಾಸನ, ಕೆ.ಆರ್ ಪೇಟೆಯ ಬಡ ಕೂಲಿ ಕಾರ್ಮಿಕರು ಮಹಾರಾಷ್ಟ್ರದ ನಾನಾ ಭಾಗದಿಂದ ಲಾಕ್ ಡೌನ್ ಹಿನ್ನಲೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬಂಧಿಸಲಾಗಿದೆ. ಆದರೆ ಯಾವುದೇ ವ್ಯವಸ್ಥೆ ಕೊಟ್ಟಿಲ್ಲ. ನಮ್ಮನ್ನು ಪಾರುಮಾಡಿ ಎಂದು ವೀಡಿಯೋ ಮಾಡಿ ಕೇಳಿಕೊಂಡಿದ್ದಾರೆ.
ಅಲ್ಲದೆ ನಾವು ಹೋಮ್ ಕ್ವಾರಂಟೈನ್ಗೆ ಸಿದ್ದರಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಸಹಾಯಕ್ಕಾಗಿ ವೀಡಿಯೋ ಮೂಲಕ ಮನವಿ ಮಾಡಿದ ಯುವಕರು ಅಗತ್ಯ ಸಹಾಯ ಸಿಗುವವರೆಗೂ ವೀಡಿಯೋ ತಲುಪಿಸಿ ಎಂದು ಮನವಿ ಮಾಡಿದ್ದಾರೆ.