ಬೆಂಗಳೂರು: ಬಿಬಿಎಂಪಿ, ಸಕಾಲ ಇಲಾಖೆಗಳಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿ, ನಿಷ್ಠಾವಂತ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದ ಕೆ. ಮಥಾಯಿ ಅವರು ಬಿಡಿಎ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಸಕಾಲ ಆಡಳಿತಾಧಿಕಾರಿಯಾಗಿದ್ದ ಕೆ. ಮಥಾಯಿ ಇದೀಗ ವರ್ಗಾವಣೆಗೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಬಿಡಿಎನಲ್ಲಿ ಒಟ್ಟು ನಾಲ್ವರು ಭೂಸ್ವಾಧೀನ ಅಧಿಕಾರಿಗಳಿದ್ದು, ಉಪ ಆಯುಕ್ತರ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಮುಖ ಯೋಜನೆಗಳು, ಬಡಾವಣೆಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಬಿಡಿಎ ಸ್ವಾಧೀನ ಪಡಿಸಿಕೊಳ್ಳುವುದು ಅಧಿಕಾರಿಗಳ ಕೆಲಸವಾಗಿರುತ್ತದೆ.
ಇದೆ ವೇಳೆ ಮಾತನಾಡಿದ ಕೆ. ಮಥಾಯಿ ಅವರು, ಸರ್ಕಾರ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿದ್ದೇನೆ. ಬಿಡಿಎ ಆಯುಕ್ತರು ನೀಡುವ ನಿರ್ದೇಶನದಂತೆ ಕೆಲಸ ಮಾಡಲು ತಯಾರಿದ್ದೇನೆ. ಆಯುಕ್ತರಾದ ಡಾ. ಪ್ರಕಾಶ್ ಅವರು ಹೊಸ ಯೋಜನೆಯ ಕೆಲಸವನ್ನೇ ನೀಡುವ ಸಾಧ್ಯತೆಯಿದೆ. ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.