ಬೆಂಗಳೂರು: ಚಿಕ್ಕಬಳ್ಳಾಪುರ ಹಾಗೂ ಶಿವಮೊಗ್ಗ ಸ್ಫೋಟ ಪ್ರಕರಣಗಳ ನಂತರ ಗಣಿಕಾರಿಕೆ ಕಂಪನಿಗಳ ಪರವನಾಗಿ ಮತ್ತು ದಂಡ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದರು.
ವಿಕಸಾಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು ಮುಂದೆ ಒಂದು ಪಟ್ಟು ದಂಡ ವಿಧಿಸುವುದಕ್ಕೆ ಮಾತ್ರ ನಿರ್ಧರಿಸಲಾಗಿದೆ ಎಂದರು.
ಡಿಜಿಎಂಎಸ್ ಲೈಸೆನ್ಸ್ ತೆಗೆದುಕೊಳ್ಳುವುದಕ್ಕೆ 90 ದಿನಗಳ ಕಾಲಾವಕಾಶ ನೀಡಿದ್ದೆವು. ರಾಜ್ಯಾದ್ಯಂತ ಕಾನೂನು ಬಾಹಿರ ಗಣಿಗಾರಿಕೆ ನಡೆಯುವ ಕಡೆ ಡ್ರೋನ್ ಮೂಲಕ ಸಮೀಕ್ಷೆ ನಡೆಸಿ ದಂಡ ವಿಧಿಸಲಾಗಿತ್ತು. ಸುಮಾರು 6000 ಕೋಟಿ ರೂ.ನಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗಿತ್ತು. ಆದರೆ ಗಣಿ ಮಾಲೀಕರು ಈ ದಂಡ ಐದು ಪಟ್ಟು ಹೆಚ್ಚಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ 2,000ಕ್ಕೂ ಹೆಚ್ಚು ಗಣಿಗಾರಿಕೆಗಳು ಬಂದ್ ಆಗಿದ್ದವು ಎಂದು ವಿವರಿಸಿದರು.
ಆಕ್ಸಿಜನ್ ಕೊರತೆಯಾಗದಂತೆ ಕ್ರಮ:
ರಾಜ್ಯದಲ್ಲಿ ಕೊವಿಡ್ -19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೆಲವರಿಗೆ ಆಕ್ಸಿಜನ್ ಕೊರತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಉಂಟಾಗದಂತೆ ಇಲಾಖೆ ವತಿಯಿಂದ ಕೆಲವು ತುರ್ತು ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.
ಎಲ್ಲರೂ ಕೈ ಜೋಡಿಸಲಿ:
ಸಚಿವರುಗಳು ಸಕ್ರಿಯರಾಗಿಲ್ಲ ಎಂಬ ವಿಪಕ್ಷ ನಾಯಕರ ಟೀಕೆಗೆ ಪ್ರತಿಕ್ರಯಿಸಿದ ನಿರಾಣಿ, ಎಲ್ಲರೂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ನಾನೂ ಎಲ್ಲ ಸಹೋದ್ಯೋಗಿ ಸಚಿವರಲ್ಲಿ ಸ್ನೇಹಪೂರ್ವಕವಾಗಿ ವಿನಂತಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಟ ಮಾಡೋಣ. ವಿಪಕ್ಷದವರೂ ಈ ವಿಚಾರದಲ್ಲಿ ನಮ್ಮ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.