ನೆಲಮಂಗಲ(ಬೆಂ.ಗ್ರಾ): ತುಮಕೂರು ರಸ್ತೆಯ ಮಾದವಾರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವೈದಕೀಯ ವ್ಯವಸ್ಥೆ ಸೇರಿ ಎಲ್ಲಾ ರೀತಿಯ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ಅನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರ ನೇಮಕ, ಹಾಸಿಗೆ ಖರೀದಿ ಪ್ರಕ್ರಿಯೆಯಲ್ಲಿ ಗೊಂದಲವಿದೆ. ಕೋವಿಡ್-19 ಕೇರ್ ಕೇಂದ್ರ ಪ್ರಾರಂಭವಾಗುವುದು ಮತ್ತಷ್ಟು ವಿಳಂಬವಾಗಲಿದೆ ಎಂದರು.
ಬಿಐಇಸಿಯಲ್ಲಿ ಏಷಿಯಾದಲ್ಲಿಯೇ ದೊಡ್ಡದಾದ ಕೋವಿಡ್ ಸೆಂಟರ್ ಮಾಡಿದ್ದೀವಿ ಅಂತಾ ಸಿಎಂ ಬಿಎಸ್ವೈ ಹೇಳಿದ್ರು. ಕುತೂಹಲದಿಂದ ನಾನು ನೋಡೋದಿಕ್ಕೆ ಬಂದಿದ್ದೇನೆ, ಅದರಲ್ಲಿ ಇನ್ನೂ ಸಂಪೂರ್ಣ ಕೆಲಸ ಮುಗಿದಿಲ್ಲ. ಸರ್ವ ಪಕ್ಷಗಳ ಸಭೆಯಲ್ಲಿ ಕೋವಿಡ್ ಸೆಂಟರ್ ಮಾಡಬೇಕು ಎಂದು ಮಾರ್ಚ್ ತಿಂಗಳಲ್ಲಿ ನಾವು ಸರ್ಕಾರಕ್ಕೆ ಸಲಹೆ ಕೊಟ್ಟಿದ್ವಿ. ಆದರೆ, ಸರ್ಕಾರ ಬಹಳ ವಿಳಂಬವಾಗಿ ಕೋವಿಡ್ ಕೇರ್ ಕೇಂದ್ರ ಮಾಡಿದೆ ಎಂದರು.
ಬೆಡ್ಗಳಿಲ್ಲದೆ ಅನೇಕ ಸಮಸ್ಯೆಗಳು ಆಗ್ತಾ ಇದೆ, ನೀವು ಟಿವಿಯಲ್ಲಿ ತೋರಿಸ್ತಾ ಇದ್ದೀರಾ, ಸಿದ್ಧತೆ ಮಾಡಿಕೊಳ್ಳಲು ಸರ್ಕಾರಕ್ಕೆ ಸಮಯ ಇತ್ತು. 4 ತಿಂಗಳ ಸಮಯವಿದ್ದು, ಲಾಕ್ಡೌನ್ನಲ್ಲಿ ಸರ್ಕಾರ ಸಿದ್ಧತೆ ಮಾಡಬೇಕಿತ್ತು. ಈ ಬೃಹತ್ ಕೋವಿಡ್ ಕೇರ್ ಕೇಂದ್ರಕ್ಕೆ 1,800 ಜನ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಬೇಕು, ಇನ್ನೂ ನೇಮಕಾತಿ ಹಂತದಲ್ಲೇ ಇದೆ. ಶುಕ್ರವಾರದಿಂದ ದಾಖಲಾತಿ ಶುರುವಾಗುತ್ತೆ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಆ ಸಮಯಕ್ಕೆ ಆಗೋದಿಲ್ಲ ಎಂಬುದು ನನ್ನ ಅನುಮಾನ ಎಂದರು.
ಗುತ್ತಿಗೆದಾರರ ಸಮಸ್ಯೆ ಇನ್ನೂ ಇತ್ಯರ್ಥ ಆಗಿಲ್ಲ. ಮುಂಚೆ 800 ಬಾಡಿಗೆ ಕೊಡ್ತೀವಿ ಅಂತಾ ಹೇಳಿದ್ರಂತೆ, ಈಗ ಕ್ರಯಕ್ಕೆ ತಗೋಳೋದು ಅಂತಾ ಹೇಳ್ತಿದ್ದಾರಂತೆ. ಅದು ಇನ್ನೂ ಇತ್ಯರ್ಥವಾಗಿಲ್ಲ, ಇತ್ಯರ್ಥ ಆಗದೆ ಶುರು ಮಾಡೋಕೆ ಆಗಲ್ಲ. ಒಂದೊಂದು ಹಾಲ್ನಲ್ಲೂ 1,700 ಸುಮಾರು ಬೆಡ್ಗಳಿವೆ. ಆದರೆ, ಶೌಚಾಲಯ ತುಂಬಾ ದೂರವಿದ್ದು, ಇದರಿಂದ ರೋಗಿಗಳಿಗೆ ತೊಂದರೆಯಾಗಲಿದೆ ಎಂದರು.
ಸಾಕಷ್ಟು ಕೆಲಸಗಳು ಬಾಕಿ ಇದ್ದು ಕೂಡಲೇ ಎಲ್ಲವೂ ಸಿದ್ಧವಾಗಬೇಕು. ಮೊದಲು ವೈದ್ಯರನ್ನ ಹಾಗೂ ಇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ, ಇವ್ರು ಮೊದಲು ಮಾಡೋದನ್ನ ಈಗ ಮಾಡುತ್ತಿದ್ದಾರೆ, ಇದರಿಂದ ಉದಾಸೀನ ತೋರಿಸಿರುವುದು ಬಹಳ ಸ್ಪಷ್ಟ ಗೋಚರಿಸುತ್ತದೆ ಎಂದರು. ತಜ್ಞರು ರೋಗ ಉಲ್ಬಣದ ಬಗ್ಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದರು. ಆದರೆ, ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದರು.
ರೋಗ ತಡೆಗಟ್ಟಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಗುಣ ಪಡಿಸುವಲ್ಲಿಯೂ ವಿಫಲವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ವೈರಸ್ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದರು. ಸರ್ವಾಧಿಕಾರಿ ಮನೋಭಾವದಿಂದ ಸರ್ಕಾರ ನಡೆಯುತ್ತಿದೆ, ಇನ್ನಾದರು ಸರ್ಕಾರ ಎಚ್ಚೆತ್ತು ಅಗತ್ಯ ಕ್ರಮಕೈಗೊಳ್ಳಬೇಕು, ಗುತ್ತಿಗೆದಾರರ ಕಷ್ಟ ಪರಿಹಾರ ಮಾಡಬೇಕು ಎಂದರು.
ಸರ್ಕಾರ ದುಪ್ಪಟ್ಟು ದರದಲ್ಲಿ ಚಿಕಿತ್ಸಾ ಪರಿಕರಗಳ ಖರೀದಿಯ ಬಗ್ಗೆ ನಾನು 3ನೇ ತಾರೀಕು ಆರೋಪ ಮಾಡಿದ್ದೆ. ಅವರು 20ನೇ ತಾರೀಕು ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದವರೇ 4 ಲಕ್ಷಕ್ಕೆ ಒಂದು ವೆಂಟಿಲೇಟರ್ ಖರೀದಿ ಮಾಡಿದ್ದಾರೆ. ಇವರು 5 ಲಕ್ಷದಿಂದ 15 ಲಕ್ಷ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ 4 ಲಕ್ಷ 70 ಸಾವಿರಕ್ಕೆ ಕೊಂಡುಕೊಂಡಿದ್ದಾರೆ. ಗುರುವಾರ ಎಲ್ಲ ದಾಖಲೆಗಳೊಂದಿಗೆ ನಾವು ಬರುತ್ತೇವೆ ಎಂದರು.
ಇನ್ನೂ ಕಾಂಗ್ರೆಸ್ಗೆ ಕ್ವಾಲಿಟಿ ಬಗ್ಗೆ ಗೊತ್ತಿಲ್ಲ ಎನ್ನುವ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಅವರು, ಗುರುವಾರ ಎಲ್ಲಾ ದಾಖಲೆಗಳೊಂದಿಗೆ ಬರುವೆ. ನಾನೇನು ಸರ್ವಜ್ಞ ಅಲ್ಲ. ಪರಿಕರಿಗಳ ಕ್ವಾಲಿಟಿಯ ಬಗ್ಗೆ ಜನ ಹೇಳ್ತಾರೆ ಮಂತ್ರಿ(ಶ್ರೀರಾಮುಲು)ಯಾದ ಮಾತ್ರಕ್ಕೆ ಅವರೇನೂ ಸರ್ವಜ್ಞರಲ್ಲ. ನಾವು ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಣೆ ಮಾಡ್ತಿದ್ದೇವೆ. ಅಕ್ರಮ ನಡೆದರೂ ಸುಮ್ಮನೆ ಕೂರಬೇಕಾ? ಎಂದು ಪ್ರಶ್ನೆ ಮಾಡಿದರು. ಸಮಾಜಕಲ್ಯಾಣ, ಬಿಬಿಎಂಪಿ, ನಗರಾಭಿವೃದ್ದಿ, ಆರೋಗ್ಯ, ಮೆಡಿಕಲ್ ಎಜುಕೇಷನ್, ಕಂದಾಯ ಇಲಾಖೆಗಳಲ್ಲಿ ಹಗರಣ ಆಗಿದೆ ಎಂದರು.
ಮಾಜಿ ಸಚಿವ ಮುರುಗೇಶ ನಿರಾಣಿ ಹಿಂದೂ ದೇವರಗಳನ್ನ ನಿಂದಿಸಿದ ಕೃತ್ಯಕ್ಕೆ ಸಿದ್ದು ಗರಂ ಆದರು. ಅಧಿಕಾರ ಹಣ ಜಾಸ್ತಿ ಆದಾಗ ಇಂತಹ ಮಾತುಗಳು ಬರುತ್ತವೆ, ನಿರಾಣಿಯವರ ಕೃತ್ಯ ಉದ್ಧಟತನದ ಪರಮಾವಧಿ, ಮೊದಲು ದೇವರಲ್ಲಿ ನಂಬಿಕೆ ಇದಿಯಾ ಇಲ್ವಾ ಎಂಬ ಬಗ್ಗೆ ಹೇಳಲಿ, ದೇವರಿದ್ದಾನೆ ಎಂಬುವುದು ಸರ್ವ ವಿಧಿತ. ದೇವರಿದ್ದಾನೆ. ಯಾರು ದೇವರ ಬಗ್ಗೆ ನಂಬಿಕೆ ಇಟ್ಕೊಂಡಿರ್ತಾರೋ ಅವರನ್ನ ಅವಹೇಳನ ಮಾಡಿದಂತಾಗುತ್ತದೆ ಎಂದರು.