ಬಾಗಲಕೋಟೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಹಾಗೂ ಮಾರಾಟ ಯತ್ನ ಆರೋಪ ಹಿನ್ನೆಲೆ ಮಹಿಳೆಯೊಬ್ಬಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ನಡೆದಿದೆ.
ರಬಕವಿ ಪಟ್ಟಣದ ವಿದ್ಯಾನಗರ ಪ್ರದೇಶದ ನಿವಾಸಿ, ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮಠಪತಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಮಾರಾಟಕ್ಕೆ ಯತ್ನಿಸಿದ್ದರಂತೆ. ಇದನ್ನ ಪ್ರಶ್ನಿಸಲು ಹೋದ ಸ್ಥಳೀಯ ಮಹಿಳೆಯರಿಗೆ, ಜಯಶ್ರೀ ಮಠಪತಿ ಆವಾಜ್ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಜಡೆ ಹಿಡಿದು, ಆಕೆಗೆ ಥಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಛೀಮಾರಿ ಹಾಕಿದ್ದಾರೆ.
ದಾವಣಗೆರೆ ಮೂಲದ ಅಪ್ರಾಪ್ತೆಯನ್ನು ಕರೆತಂದು ಮೂರು ತಿಂಗಳಿಂದ ಮನೆಯಲ್ಲಿಟ್ಟಿಟ್ಟುಕೊಂಡಿದ್ದ ಬಸಯ್ಯ ಮಠಪತಿ ಹಾಗೂ ಪತ್ನಿ ಜಯಶ್ರೀ ಮೇಲೆ ತೇರದಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.