ನಟಿ ಹರಿಪ್ರಿಯಾ ಇದೀಗ ಕಿರುತೆರೆಗೂ ಕಾಲಿರಿಸಿದ್ದಾರೆ. ಇದೇನಪ್ಪಾ ಸಿನಿಮಾಗಳಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಹರಿಪ್ರಿಯಾ ಕಿರುತೆರೆಯತ್ತ ಏಕೆ ಮುಖ ಮಾಡುತ್ತಿದ್ದಾರೆ. ಯಾವುದಾದರೂ ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಎಂಬ ಅನುಮಾನ ಕಾಡುವುದು ಖಂಡಿತ.
ಉದಯ ಟಿವಿಯಲ್ಲಿ ಇದೇ ತಿಂಗಳ 17ರಿಂದ ಪ್ರಸಾರವಾಗುತ್ತಿರುವ 'ನಾಯಕಿ' ಧಾರಾವಾಹಿಗೆ ಹರಿಪ್ರಿಯಾ ರಾಯಭಾರಿ ಆಗಿ (ಸೀರಿಯಲ್ ಪ್ರಚಾರಕಿ ಅಂತಲೂ ಹೇಳಬಹುದು) ಒಪ್ಪಿಗೆ ನೀಡಿದ್ದಾರೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಸಂಜೆ 7 ಗಂಟೆಗೆ ಪ್ರಸಾರವಾಗುವ ಧಾರಾವಾಹಿ ಹರಿಪ್ರಿಯಾ ಅವರ ಆಗಮನದಿಂದಲೇ ಪ್ರಾರಂಭ ಆಗಲಿದೆ. ಇದೇ 17ರಂದು ‘ನಾಯಕಿ’ ಪ್ರಸಾರ ಆಗಲಿದೆ. ಇತರ ಧಾರಾವಾಹಿಗಳಿಗಿಂತ ಇದು ಬಹಳ ವಿಭಿನ್ನ ಧಾರಾವಾಹಿ ಎಂದು ಚಿತ್ರತಂಡ ಹೇಳಿದೆ.
ಈ ಧಾರಾವಾಹಿಯಲ್ಲಿ ‘ಬಡ್ಡಿ ಬಂಗಾರಮ್ಮ’ ಆಗಿ ಹಿರಿಯ ನಟಿ ಹೇಮಾ ಚೌಧರಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾವ್ಯ ಸೌಂದರ್ಯ ಎಂಬ ಕಥಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದೀಪಕ್ ನಾಯಕನಾಗಿ ಸಿದ್ದಾರ್ಥ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀ ಅನಘ ಕ್ರಿಯೇಷನ್ ಅಡಿಯಲ್ಲಿ ಶಶಿಧರ್ ಕೆ. ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.