ಕನ್ನಡ, ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ ರಮೇಶ್ ಅರವಿಂದ್ ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಇದಕ್ಕೂ ಮುನ್ನ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸೂಪರ್ ನ್ಯಾಚುರಲ್ ಧಾರಾವಾಹಿ 'ನಂದಿನಿ'ಯನ್ನು ನಿರ್ಮಿಸಿದ್ದ ರಮೇಶ್ ಅರವಿಂದ್ ಈಗ ಮತ್ತೊಂದು ಧಾರಾವಾಹಿಯನ್ನು ನಿರ್ಮಿಸಲು ಹೊರಟಿದ್ದಾರೆ. ರಮೇಶ್ ನಿರ್ಮಿಸುತ್ತಿರುವ ಈ ಧಾರಾವಾಹಿಗೆ ಸುಂದರಿ ಎಂದು ಹೆಸರಿಡಲಾಗಿದೆ.
'ಸುಂದರಿ' ಧಾರಾವಾಹಿ ಕೂಡಾ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆದರೆ ಈ ಧಾರಾವಾಹಿ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ರಮೇಶ್ ಅರವಿಂದ್ ಅವರು ನಿರೂಪಕರಾಗಿ ಕಿರುತೆರೆಗೆ ಕಾಲಿಟ್ಟರು. ಜೀ ಕನ್ನಡ ವಾಹಿನಿಯಲ್ಲಿ ಅವರು ನಡೆಸಿಕೊಡುತ್ತಿದ್ದ 'ವೀಕೆಂಡ್ ವಿತ್ ರಮೇಶ್' ಯಶಸ್ವಿ ನಾಲ್ಕು ಸೀಸನ್ ಗಳಲ್ಲಿ ಪ್ರಸಾರಗೊಂಡು ಜನ ಮನ್ನಣೆ ಗಳಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಸಾಧನೆಯನ್ನು ಅನಾವರಣಗೊಳಿಸಿ ಅವರ ಸಾಧನೆಗೆ ಪ್ರೇರೇಪಿಸಿದ ಕುಟುಂಬಸ್ಥರು ,ಸ್ನೇಹಿತರನ್ನು ಈ ಕಾರ್ಯಕ್ರಮದಲ್ಲಿ ಕರೆಸಲಾಗುತ್ತಿತ್ತು. ರಮೇಶ್ ಅವರ ನಿರೂಪಣೆಯನ್ನು ಕಿರುತೆರೆ ವೀಕ್ಷಕರು ಬಹಳ ಮೆಚ್ಚಿದ್ದರು.ಇದರ ಜೊತೆಗೆ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ನಿರೂಪಕರಾಗಿ ಕೂಡಾ ರಮೇಶ್ ಅರವಿಂದ್ ಒಂದು ಸೀಸನ್ನಲ್ಲಿ ಕಾಣಿಸಿಕೊಂಡಿದ್ದರು. ನಂತರ ಧಾರಾವಾಹಿ ನಿರ್ಮಾಣದತ್ತ ಬಂದ ರಮೇಶ್, ನಂದಿನಿ ಧಾರಾವಾಹಿಯನ್ನು ನಿರ್ಮಿಸಿದರು. ಈಗ 'ಸುಂದರಿ' ಧಾರಾವಾಹಿ ಮೂಲಕ ಮತ್ತೊಮ್ಮೆ ವೀಕ್ಷಕರಿಗೆ ಮನರಂಜನೆ ನೀಡಲು ಬರುತ್ತಿದ್ದಾರೆ.