ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ತಮಿಳು ಚಿತ್ರಗಳಲ್ಲಿ ಹೆಸರು ಮಾಡಿ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ.
ರಜನಿಕಾಂತ್ ಕೆಲವೊಮ್ಮೆ ಗಮನಾರ್ಹ ವಿಚಾರಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ರಜನಿಕಾಂತ್ ತಾವು ಈ ಮಟ್ಟಕ್ಕೆ ಬೆಳೆಯಲು ಕಾರಣರಾದವರನ್ನು ಎಂದಿಗೂ ಮನಸ್ಸಿನಲಿಟ್ಟು ಪೂಜೆ ಮಾಡುತ್ತಾರೆ ಎನ್ನುವುದಕ್ಕೆ ಇತ್ತೀಚೆಗೆ ನಡೆದ ವಿಚಾರವೊಂದು ಸಾಕ್ಷಿಯಾಗಿದೆ.
ರಜನಿಕಾಂತ್, ಕಮಲ ಹಾಸನ್ ಅಂತಹ ಮೇರು ನಟರನ್ನು ಪರಿಚಯ ಮಾಡಿದ್ದು ತಮಿಳು ನಿರ್ದೇಶಕ ಕೆ. ಬಾಲಚಂದರ್. ಬಾಲಚಂದರ್ ಅವರ 90 ನೇ ಜನ್ಮದಿನ ಆಚರಣೆ ಜುಲೈ 9 ರಂದು ತಮಿಳುನಾಡಿನಲ್ಲಿ ನಡೆಯಿತು. ಕೆ.ಬಿ ಎಂದೇ ಫೇಮಸ್ ಆದ ಬಾಲಚಂದರ್ ಡಿಸೆಂಬರ್ 23, 2014 ರಲ್ಲಿ ಕಾಲವಾದರು. ಅವರು ನಿಧನ ಹೊಂದಿ 6 ವರ್ಷಗಳಾದರೂ ಅವರ ಜನ್ಮದಿನ ಹಾಗೂ ನಿಧನರಾದ ದಿನದಂದು ತಮಿಳು ಚಿತ್ರರಂಗ ಸ್ಮರಣೀಯ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ.
ಕೆ.ಬಿ ಅವರನ್ನು ನೆನೆಯುತ್ತಾ ಸೂಪರ್ ಸ್ಟಾರ್ ರಜನಿಕಾಂತ್ ಕಾರ್ಯಕ್ರಮಕ್ಕೆ ಒಂದು ಪುಟ್ಟ ವೀಡಿಯೋ ಸಂದೇಶ ತಲುಪಿಸಿದ್ದಾರೆ. ನನ್ನ ಜೀವನದಲ್ಲಿ ನಾಲ್ಕು ದೇವರುಗಳಿದ್ದಾರೆ. ನನ್ನ ಅಮ್ಮ, ಅಪ್ಪ, ಸಹೋದರ ಸತ್ಯನಾರಾಯಣ್ ರಾವ್ ಹಾಗೂ ನನ್ನನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಕೆ. ಬಾಲಚಂದರ್ ಎಂದು ಹೇಳಿಕೊಂಡಿದ್ದಾರೆ. ಇಷ್ಟು ಸಾಕು ರಜನಿಕಾಂತ್ ತಮಗೆ ಸಹಾಯ ಮಾಡಿದವರನ್ನು ಇಂದಿಗೂ ದೇವರಂತೆ ಕಾಣುತ್ತಾರೆ ಎಂದು ಹೇಳುವುದಕ್ಕೆ.
ರಜನಿಕಾಂತ್ ಚೆನ್ನೈ ಫಿಲ್ಮ್ ಇನ್ಸ್ಟಿಟ್ಯೂಷನ್ನಲ್ಲಿ ಕಲಿಯುವಾಗ ಕೆ. ಬಾಲಚಂದರ್ ಅವರು ರಜನಿಕಾಂತ್ ಅವರನ್ನು ನೋಡಿ 'ಅಪೂರ್ವ ರಾಗಂಗಳ್' ಸಿನಿಮಾಗೆ ಆಯ್ಕೆ ಮಾಡಿಕೊಂಡರು. ಅದೇ ಚಿತ್ರದಲ್ಲಿ ಕಮಲ ಹಾಸನ್ ಹಾಗೂ ಶ್ರೀವಿದ್ಯಾ ಸಹ ಪರಿಚಯ ಆದರು. ರಜನಿಕಾಂತ್ ಆಗಿನ್ನೂ ಶಿವಾಜಿರಾವ್ ಗಾಯಕ್ವಾಡ್ ಆಗಿದ್ದರು. ಅವರಿಗೆ ರಜನಿಕಾಂತ್ ಎಂಬ ಹೆಸರಿಟ್ಟಿದ್ದು ಕೂಡಾ ಕೆ. ಬಾಲಚಂದರ್ ಅವರೇ.
ಕೆ. ಬಾಲಚಂದರ್ ಚಿತ್ರರಂಗಕ್ಕೆ ಅನೇಕ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ಆದರೆ ಕೆ. ಬಾಲಚಂದರ್ ನಟಿಸುವ ಸಿನಿಮಾಗೆ ನಿರ್ದೇಶನ ಮಾಡುವ ಅವಕಾಶ ದೊರೆತದ್ದು ಮಾತ್ರ ರಮೇಶ್ ಅರವಿಂದ್ ಅವರಿಗೆ. 'ಉತ್ತಮ ವಿಲನ್' ಚಿತ್ರದಲ್ಲಿ ಕೆ. ಬಾಲಚಂದರ್ ನಟಿಸಿದ್ದರು. ಚಿತ್ರದಲ್ಲಿ ಕಮಲ ಹಾಸನ್ ನಾಯಕನಾಗಿ ನಟಿಸಿದ್ದರು. ಆದರೆ ಈ ಚಿತ್ರ ಬಿಡುಗಡೆ ಆಗುವ ವೇಳೆಗೆ ಕೆ. ಬಾಲಚಂದರ್ ನಿಧನರಾಗಿದ್ದರು.