ನಟರ ಹೆಸರಿನಲ್ಲಿ ಅಭಿಮಾನಿಗಳು ಸಂಘ ಕಟ್ಟುವುದು ಸಾಮಾನ್ಯ. ಆದರೆ ನಟರ ಸಂಘದ ಹೆಸರೇ ಸಿನಿಮಾ ಟೈಟಲ್ ಆದರೆ? ಹೌದು, ‘ಡಾ ರಾಜ್ಕುಮಾರ್ ಅಭಿಮಾನಿಗಳ ಸಂಘ’ ಎಂಬ ಸಿನಿಮಾ ಇದೀಗ ಸ್ಯಾಂಡಲ್ವುಡ್ನಲ್ಲಿ ತಯಾರಾಗುತ್ತಿದೆ.
ಶಿವ ಆರ್ಟ್ಸ್ ಆ್ಯಂಡ್ ಮೂವೀಸ್ ಬ್ಯಾನರ್ ಮೂಲಕ ‘ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘ’ ಸಿನಿಮಾ ಮೈದಳೆಯುತ್ತಿದೆ. ಸಿನಿಮಾ ಶೀರ್ಷಿಕೆಯನ್ನು ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಅನಾವರಣ ಮಾಡಿದ್ದಾರೆ. ರವಿಗೌಡ ಮಂಡ್ಯ ಹಾಗೂ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ತಾರಕರಾಮ್ ಎಂಬುವವರು ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಈ ಮುನ್ನ ಇವರು ‘ವಸುಂಧರೆ’ ಸೇರಿ ಅನೇಕ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಜೊತೆಗೆ ಬಹಳಷ್ಟು ಸಿನಿಮಾಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ರೈತರ ಸಮಸ್ಯೆ ಜೊತೆ ಮಂಡ್ಯ ಸೊಗಡಿನ ವಿಚಾರ ಇಟ್ಟುಕೊಂಡು ಚಿತ್ರದ ಕಥೆಯನ್ನು ಬರೆಯಲಾಗಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಚಿತ್ರಕ್ಕೆ ‘ಟಗರು’ ಖ್ಯಾತಿಯ ಮಾಸ್ತಿ ಮಂಜು ಸಂಭಾಷಣೆ, ಕೆಜಿಎಫ್ ಶ್ರೀಕಾಂತ್ ಸಂಕಲನ ಇದೆ.