ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೋ ಡಿ ಬಾಸ್ ದರ್ಶನ್ ಅಭಿನಯದ 50ನೇ ಹಾಗೂ ಬಹು ತಾರಾಗಣವಿರುವ 'ಕುರುಕ್ಷೇತ್ರ' ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದು, ಆಗಸ್ಟ್ 9 ರಂದು ತೆರೆ ಕಾಣಲಿದೆ.
'ಕುರುಕ್ಷೇತ್ರ' ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದ್ರೆ ಈ ಬೇಸರಕ್ಕೆ ಬ್ರೇಕ್ ಬಿದ್ದಿದ್ದು,ಬಹು ನಿರೀಕ್ಷಿತ ಚಿತ್ರ ಆಗಸ್ಟ್ 9 ರಂದು ಬೆಳ್ಳಿ ತೆರೆ ಮೇಲೆ ಮೂಡಿ ಬರಲಿದೆ.
'ಕುರುಕ್ಷೇತ್ರ' ಸಿನಿಮಾ ಕನ್ನಡ ಹಾಗು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು, ಆಗಸ್ಟ್ 15ಕ್ಕೆ ತಮಿಳು ಹಾಗು ಮಲೆಯಾಳಂ ಭಾಷೆಯಲ್ಲೂ ಬಿಡುಗಡೆಗೊಳ್ಳಲಿದೆ. ಇದಾದ ಒಂದು ವಾರದ ಬಳಿಕ ಮುಂಬೈ ಸೇರಿದಂತೆ ವರ್ಲ್ಡ್ ವೈಡ್ ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ.
'ಕುರುಕ್ಷೇತ್ರ' ಸಿನಿಮಾವನ್ನು ಬರೋಬ್ಬರಿ 3,000 ಥಿಯೇಟರ್ಗಳಲ್ಲಿ 2D ಹಾಗು 3Dಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಅಂಬರೀಶ್-ಭೀಷ್ಮನಾಗಿ, ಕೃಷ್ಣನಾಗಿ-ರವಿಚಂದ್ರನ್, ಅಭಿಮನ್ಯುವಾಗಿ-ನಿಖಿಲ್ ಕುಮಾರಸ್ವಾಮಿ, ಶಕುನಿ-ರವಿಶಂಕರ್, ಕುಂತಿ-ಭಾರತಿ ವಿಷ್ಣುವರ್ಧನ್, ದ್ರೌಪತಿ-ಸ್ನೇಹಾ, ದ್ರೋಣಾಚಾರ್ಯ- ಶ್ರೀನಿವಾಸಮೂರ್ತಿ, ಧೃತರಾಷ್ಟ್ರ- ಶ್ರೀನಾಥ್ ಹೀಗೆ ದೊಡ್ಡ ತಾರ ಬಳಗವೇ ಚಿತ್ರದಲ್ಲಿ ಕಾಣಿಸಿಕೊಂಡಿದೆ.
ಈ ವೇಳೆ ದುರ್ಯೋಧನನ ಪಾತ್ರಕ್ಕೆ ದರ್ಶನ್ ಸಿದ್ಧತೆ ಹೇಗಿತ್ತು, ಪ್ರತಿದಿನ ಶೂಟಿಂಗ್ ಸೆಟ್ನಲ್ಲಿ ಆ ಪಾತ್ರಕ್ಕೆ ರೆಡಿಯಾಗಲು ಎಷ್ಟು ಗಂಟೆ ಬೇಕು, ದರ್ಶನ್ ಕೈಯಲ್ಲಿದ್ದ ಗದೆ, ಕಿರೀಟ ಯಾಕೆ ಈ ಸಿನಿಮಾಕ್ಕೆ ಸ್ಪೆಷಲ್ ಅನ್ನೋದ್ರ ಬಗ್ಗೆ ದಚ್ಚು ಸಾಕಷ್ಟು ವಿಚಾರಗಳನ್ನ ಹಂಚಿಕೊಂಡ್ರು.
ಚಿತ್ರದ ಆಡಿಯೋ ಸಾಂಗ್ ರಿಲೀಸ್ ಮಾಡಿದ ಬಳಿಕ, ನಿರ್ಮಾಪಕ ಮುನಿರತ್ನ, ನಟ ದರ್ಶನ್, ನಿರ್ದೇಶಕ ನಾಗಣ್ಣ, ಅರ್ಜುನನ ಪಾತ್ರಧಾರಿ ಸೋನ್ ಸೂದ್, ಭೀಮನ ಪಾತ್ರಧಾರಿ ಡ್ಯಾನಿಶ್ ಅಖ್ತರ್, ಧರ್ಮರಾಯನ ಪಾತ್ರಧಾರಿ ಶಶಿಕುಮಾರ್, ಭಾನುಮತಿ ಪಾತ್ರಧಾರಿ ಮೇಘನಾರಾಜ್, ಶಕುನಿ ಪಾತ್ರಧಾರಿ ರವಿಶಂಕರ್, ಶಲ್ಯ ಪಾತ್ರ ಮಾಡಿರೋ ರಾಕ್ ಲೈನ್ ವೆಂಕಟೇಶ್, ಸಹದೇವ ಪಾತ್ರಾಧಾರಿ ಯಶಸ್ ಸೂರ್ಯ, ದುಶ್ಯಾಸನ ಪಾತ್ರಧಾರಿ ಚೇತನ್ ಹಾಗು ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್ ಮುಂತಾದವರು ಕುರುಕ್ಷೇತ್ರ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ್ರು.