ಈ ಬಾರಿ ಪ್ರದರ್ಶಕ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು. ಈ ಬಾರಿ ಹಿರಿಯ ಪ್ರದರ್ಶಕ ಜೈ ರಾಜ್ ಅವರ ಹೆಸರಿನೊಂದಿಗೆ ಪ್ರದರ್ಶಕ, ನಿರ್ಮಾಪಕ, ನಟ, ರಾಕ್ಲೈನ್ ವೆಂಕಟೇಶ್ ಹೆಸರು ಕೂಡಾ ಅಧ್ಯಕ್ಷ ಗಾದಿಗೆ ಕೇಳಿ ಬರುತ್ತಿದೆ.
ಆದರೆ, ಇಲ್ಲೊಂದು ಪ್ರಮುಖ ವಿಚಾರವಿದೆ. ರಾಕ್ಲೈನ್ ವೆಂಕಟೇಶ್ ಮುಂದಿನ ದಿನಗಳಲ್ಲಿ ನಿರ್ಮಾಪಕರ ವಲಯದಿಂದ ಅಧ್ಯಕ್ಷ ಆಗಿ ಆಯ್ಕೆ ಆಗಬಹುದು. ಅವರಿಗೆ ಈಗ ಸಾಕಷ್ಟು ಕೆಲಸ ಇವೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಉಸ್ತುವಾರಿ ಅವರ ಮೇಲಿದೆ. ದೊಡ್ಡ ಸಿನಿಮಾಗಳ ನಿರ್ಮಾಣ ಸಹ ಮಾಡುತ್ತಿದ್ದಾರೆ. ಇದರೊಂದಿಗೆ ರಾಕ್ಲೈನ್ ಮಾಲ್ ಕೂಡಾ ನಡೆಸುತ್ತಿದ್ದಾರೆ. ಆದ್ದರಿಂದ ಪ್ರದರ್ಶಕ ವಲಯದಿಂದ ಅವರು ಬರುವುದು ಸೂಕ್ತ ಅಲ್ಲ ಎಂಬ ಮಾತು ಕೇಳಿಬರುತ್ತಿದೆ.
ಹೆಚ್ಚಿನ ಕಲಾವಿದರು ಜೈರಾಜ್ ಪರವಾಗಿದ್ದಾರೆ. ಜೈರಾಜ್ ಅಲಿಯಾಸ್ ಗುಬ್ಬಿ ಜಯರಾಜ್ ತುಮಕೂರಿನ ವ್ಯಕ್ತಿ. ಇವರು ಹಿರಿಯ ಪ್ರದರ್ಶಕರು. ಹಿರಿಯರು ಅನ್ನುವುದರ ಜೊತೆ ಕಾನೂನಿನ ಜ್ಞಾನ ಕೂಡಾ ಅವರಿಗಿದೆ. ಹಾಗಾಗಿ ವಾಣಿಜ್ಯ ಮಂಡಳಿ ವ್ಯಾಜ್ಯ ಮಂಡಳಿ ಆಗುವುದನ್ನು ತಡೆಗಟ್ಟುವ ಶಕ್ತಿ ಅವರಿಗಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಜೂನ್ 25 ರಂದು ನಾಮಿನೇಶನ್ ವಾಪಸ್ ಪಡೆಯುವ ದಿನ. ಒಂದು ವೇಳೆ ಯಾರಾದರೂ ನಾಮಿನೇಷನ್ ವಾಪಸ್ ಪಡೆದರೆ ಅದೇ ದಿನ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಯಾರು ಎಂಬುದು ತಿಳಿಯುತ್ತದೆ.
ಉಪಾಧ್ಯಕ್ಷರ ಸ್ಥಾನಕ್ಕೆ ಉಮೇಶ್ ಬಣಕರ್, ಪ್ರಮಿಳಾ ಜೋಷಾಯ್, ದಿನೇಶ್ ಗಾಂಧಿ ಹೆಸರು ಕೇಳಿ ಬರುತ್ತಿದೆ. ಕಾರ್ಯದರ್ಶಿ ಸ್ಥಾನಕ್ಕೆ ಎನ್.ಎಂ. ಸುರೇಶ್ ಹಾಗೂ ಭಾ.ಮ ಗಿರೀಶ್ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸಫೈರ್ ಮೂವೀಸ್ ವೆಂಕಟೇಶ್ ಹಾಗೂ ಚಾಮುಂಡೇಶ್ವರಿ ಸ್ಟುಡಿಯೋಸ್ನ ಶ್ರೀಮತಿ ರಾಜಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.