ಹೆಲ್ಮೆಟ್ ಹಾಕದಿದ್ದನ್ನು ಪ್ರಶ್ನಿಸಿದ ಪೇದೆ ಹಲ್ಲು ಮುರಿದಿದ್ದ ಆರೋಪಿ ಅಂದರ್ - The accused fled the scene
ಹೆಲ್ಮೆಟ್ ಹಾಕದೆ ವಾಹನ ಸವಾರರನ್ನು ತಡೆದ ಪೇದೆ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ವಾಹನ ಸವಾರರಿಗೆ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕೆಂದು ಸಂಚಾರಿ ಪೊಲೀಸರು ಕಿವಿಮಾತು ಹೇಳುವುದು ತಪ್ಪೇ?
ಹೆಲ್ಮೆಟ್ ಧರಿಸದೇ ಇರುವುದನ್ನ ಪ್ರಶ್ನಿಸಿದ ಪೇದೆಯ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯ್ ತರುಣ್ (21) ಬಂಧಿತ ಆರೋಪಿ. ಮೌಂಟ್ ಕಾರ್ಮೆಲ್ ಬಳಿ ಕರ್ತವ್ಯದಲ್ಲಿದ್ದ ಸಂಚಾರಿ ಪೇದೆ ರಮೇಶ್ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸದೇ ಬರುತ್ತಿದ್ದ ವಿಜಯ್ ತರುಣ್ ಹಾಗೂ ಅಜಿತ್ ಎಂಬುವರನ್ನು ಪೇದೆ ತಡೆಯಲು ಯತ್ನಿಸಿದ್ದಾರೆ. ಆಗ ಇಬ್ಬರು ಅವಾಚ್ಯವಾಗಿ ನಿಂದಿಸಿ, ಅಶ್ಲೀಲ ಸನ್ನೆ ಮಾಡಿ ಪರಾರಿಯಾಗಿದ್ದರು.
ತಕ್ಷಣ ರಮೇಶ್, ಚಕ್ರವರ್ತಿ ಲೇಔಟ್ ಬಳಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಸಂದೇಶ ರವಾನಿಸಿದ್ದಾರೆ. ತಕ್ಷಣ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅಲ್ಲಿಗೆ ರಮೇಶ್ ಹೋದಾಗ ಏಕಾಏಕಿ ಆರೋಪಿ ಮುಖಕ್ಕೆ ಗುದ್ದಿದ್ದಾನೆ.
ಪರಿಣಾಮ ಹಲ್ಲೆಯಿಂದಾಗಿ ಪೇದೆಯ ಹಲ್ಲಿನ ಚಿಪ್ಪು ಮುರಿದಿದೆ. ತಕ್ಷಣ ಸ್ಥಳದಲ್ಲೇ ವಿಜಯ್ ತರುಣ್ನನ್ನ ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿ ಅಜಿತ್ ಪರಾರಿಯಾಗಿದ್ದಾನೆ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.