ಗುಡಿಬಂಡೆ/ಚಿಕ್ಕಬಳ್ಳಾಪುರ: ಕಳೆದ ಶುಕ್ರವಾರ ರಾತ್ರಿ ಮಂಡಿಕಲ್ಲು ಗ್ರಾಮದ ಅರ್ಚಕರೊಬ್ಬರ ಮನೆಯಲ್ಲಿ ತಾವು ಪೊಲೀಸ್ ಹಾಗೂ ಪತ್ರಕರ್ತರು ಎಂದು ಹೇಳಿಕೊಂಡು ಡಕಾಯಿತಿ ಮಾಡಿದ 10 ಜನರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವೃತ್ತ ನಿರೀಕ್ಷಕ ಬಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಿಕಲ್ಲು ಗ್ರಾಮದ ನಾಗರತ್ನಮ್ಮ, ಎಂ.ಎನ್. ಜಯರಾಮ್ ಎಂಬುವರ ಮನೆಗೆ 3 ಕಾರುಗಳಲ್ಲಿ ಬಂದಿದ್ದ ಖದೀಮರು ತಾವು ಪೊಲೀಸ್ ಹಾಗೂ ಪತ್ರಕರ್ತರು ಎಂದು ಹೇಳಿಕೊಂಡಿದ್ದರು. ನಿಮ್ಮ ಮನೆಯಲ್ಲಿ ಹಣ ಇದೆ, ಜಪ್ತಿ ಮಾಡಲು ಬಂದಿದ್ದೇವೆ ಎಂದು ಬೆದರಿಸಿ ಕಬ್ಬಿಣದ ರಾಡ್ನಿಂದ ಮನೆಯಲ್ಲಿದ್ದ ಬೀರುಗಳನ್ನು ಮುರಿದು ಹುಡುಕಾಟ ನಡೆಸಿದ್ದರು. ಏನು ಸಿಗದೇ ಮನೆ ಮಾಲೀಕರ 2 ಮೊಬೈಲ್ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು. ನಂತರ ಗ್ರಾಮಸ್ಥರು ಸಿನಿಮೀಯ ರೀತಿಯಲ್ಲಿ 3 ಕಾರುಗಳಲ್ಲಿದ್ದ 10 ಡಕಾಯಿತರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇದೇ ವೇಳೆ ಮತ್ತೊಂದು ಕಾರಿನಲ್ಲಿದ್ದ 4 ನಾಲ್ವರು ಖದೀಮರು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕರಾದ ಜಾಹ್ನವಿ ಹಾಗೂ ಉಪವಿಭಾಗದ ಪೊಲೀಸ್ ಅಧೀಕ್ಷಕರಾದ ಕೆ.ರವಿಶಂಕರ್ ಮಾರ್ಗದರ್ಶನದಲ್ಲಿ ಗುಡಿಬಂಡೆ ವೃತ್ತ ನಿರೀಕ್ಷಕ ಬಿ.ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಭೇದಿಸಿದ್ದಾರೆ. ಆರೋಪಿಗಳನ್ನು ಪತ್ರಿಕೆಯ ವರದಿಗಾರ ಬೆಂಗಳೂರಿನ ಗೋವಿಂದಪುರದ ಉಸ್ಮಾನ್ ಘನಿ, ಚಾಲಕರಾದ ತಮಿಳುನಾಡು ಮೂಲದ ಕಾರ್ತಿಕೇಯನ್, ಬೆಂಗಳೂರಿನ ವಿಭೂತಿನಗರದ ಕಿರುಬಾಕರನ್ ಪಾಲ್, ಬೆಂಗಳೂರಿನ ಎಲ್.ಬಿ.ಎಸ್. ನಗರದ ರಘುನಂದನ್, ಚಿಂತಾಮಣಿಯ ಸೈಯದ್ ಅಹ್ಮದ್, ಕೋಲಾರದ ಸುನೀಲ್, ಬೆಂಗಳೂರಿನ ಲಿಂಗರಾಜಪುರದ ಸಲೀಂ, ಬೆಂಗಳೂರಿನ ಬಾಣಸವಾಡಿಯ ನದೀಮ್ ಬಾಷ, ಕೋಲಾರದ ಕೆ.ಸಿ. ಕೃಷ್ಣ, ಕೋಲಾರದ ಬಂಗಾರಪೇಟೆಯ ರಾಜೇಶ್ ಎಂದು ಗುರುತಿಸಲಾಗಿದೆ. ಇವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಪೊಲೀಸ್ ವೇಷದಲ್ಲಿ ಬಂದಿದ್ದ ಉಳಿದ ನಾಲ್ವರು ಡಕಾಯಿತರ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.