ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಹೊಸ ಪ್ರತಿಭೆಗಳ ಚಿತ್ರಗಳು ಸಹ ಬರುತ್ತಿವೆ. ಇದೀಗ ಗಿನ್ನಿಸ್ ದಾಖಲೆಯ ದರ್ಪಣ ಮತ್ತು ಬಿಡುಗಡೆಯಾಗಬೇಕಾದ ಪರಿಶುದ್ಧಂ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆರೋನ್ ಕಾರ್ತಿಕ್ ವೆಂಕಟೇಶ್ ಈಗ 'ಆಗೋದೆಲ್ಲಾ ಒಳ್ಳೇದಕ್ಕೆ' ಸಿನಿಮಾಕ್ಕೆ ಕಥೆ, ಚಿತ್ರಕಥೆ, ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರ ಸೆಟ್ಟೇರಿದ್ದು, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಬದುಕಲ್ಲಿ ಆಕಸ್ಮಿಕವಾಗಿ ಘಟನೆಗಳು ನಡಯುತ್ತಿರುತ್ತದೆ. ಆಕಸ್ಮಿಕ ಘಟನೆಗಳೇ ಸಂದೇಶ ಕೊಡುತ್ತವೆ. ಏನೇ ಆದರೂ ಆ ಸಮಯದಲ್ಲಿ ಕೆಟ್ಟದ್ದು ಅಂತ ಭಾವಿಸಬಹುದು, ಕೊನೆಗೆ ನೋಡಿದರೆ, ಆಗೋದೆಲ್ಲಾ ಒಳ್ಳೇದಕ್ಕೆ ಅನಿಸುತ್ತದೆ. ಇದು ಆಗದಿದ್ದರೆ ಸರ್ವನಾಶ, ಹಿಂಸೆ ಆಗುತ್ತಿತ್ತು. ಅಂತಿಮವಾಗಿ ಒಳ್ಳೆಯದಕ್ಕೆ ಆಯ್ತಲ್ಲಾ ಎಂದು ನೆಮ್ಮದಿ ಸಿಗುತ್ತದೆ. ಕಾಣದ ಕೈಗಳು ಒಳ್ಳೆಯದನ್ನೇ ನಡೆಸುತ್ತಾ ಬಂದಿರುತ್ತದೆ. ಏನೇ ಆದರೂ ಅದನ್ನು ಒಳ್ಳೆಯದಕ್ಕೆ ಅಂತಾ ತೆಗೆದುಕೊಂಡರೆ ಜೀವನ ಸುಂದರ. ವಿರುದ್ಧವಾಗಿ ಹೋದರೆ ಸಾಹಸ ಅಲ್ಲದೇ ಕಷ್ಟ ಕೂಡ ಆಗಬಹುದು. ಪ್ರೀತಿ-ಭಯೋತ್ಪಾದನೆ-ಸರ್ಕಾರ ಮೂರರ ಸುತ್ತ ಚಿತ್ರವು ಆ್ಯಕ್ಷನ್ ಥ್ರಿಲ್ಲರ್ ರೂಪದಲ್ಲಿ ಸಾಗುತ್ತದೆ.

ಹಿರಿಯ ನಟ ಎಂ.ಡಿ.ಕೌಶಿಕ್, ಯತಿರಾಜ್, ಸಂದೀಪ್ಮಲಾನಿ, ದುಬೈರಫೀಕ್, ಮಠಕೊಪ್ಲ, ಪವಾನಿರಾಜು, ಭಾರ್ಗವ್, ಅರ್ಚನಾ, ಕಿರಣ್, ಆಮನ್, ತೇಜಸ್ವಿನಿ, ಜೀವ, ಸೈಯದ್ಜೋಹಾನ್, ಮಾಸ್ಟರ್ ಸುಮಿತ್, ಸುಹೈಲ್ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಸಂಗಮೇಶ್, ಸಂಕಲನ ಆಯೂರ್ಸ್ವಾಮಿ, ಸಾಹಸ ಜಾನಿ ಮಾಸ್ಟರ್ ಅವರದ್ದಾಗಿದೆ. ಬೆಂಗಳೂರು, ಕಾರವಾರ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸೀಗೆಹಳ್ಳಿಯ ಎ.ಎಸ್.ಲೋಹಿತ್ ಅವರು ಬಿನಿಶಾ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಟಿ ಅಮೂಲ್ಯ ಹುಟ್ಟುಹಬ್ಬ.. ತಮಗೆ ಸೆ.14 ವ್ಯಾಲೆಂಟೈನ್ ಡೇ ಎಂದ ಪತಿ ಜಗದೀಶ್