ಕಲಬುರಗಿ: ಮಹಾನಗರ ಪಾಲಿಕೆ ತನ್ನ ಪೌರಕಾರ್ಮಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಮೂಲಕ ಮಾನವೀಯ ಕಾರ್ಯ ಮಾಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,200 ಪೌರಕಾರ್ಮಿಕರಿದ್ದು, ನಗರದ ವಿವಿಧ ಬಡಾವಣೆಗಳಲ್ಲಿ ವಾಸವಿದ್ದಾರೆ. ಕೊರೊನಾ ನಿಯಂತ್ರಿಸಲು ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಬಂದ್ ಮಾಡಲಾಗಿದೆ. ಇದರಿಂದಾಗಿ ಪೌರಕಾರ್ಮಿಕರು ಸಾರಿಗೆ ಸೌಲಭ್ಯವಿಲ್ಲದೇ ಕಿಲೋ ಮೀಟರ್ಗಟ್ಟಲೆ ನಡೆದುಕೊಂಡೇ ಬಂದು ಕೆಲಸಕ್ಕೆ ಹಾಜರಾಗುವ ಅನಿವಾರ್ಯತೆ ಎದುರಾಗಿತ್ತು.
ಇದನ್ನರಿತ ಪಾಲಿಕೆ ಆಯುಕ್ತ ಸ್ನೇಹಲ್ ಲೊಕಂಡೆ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಪೌರಕಾರ್ಮಿಕರ ಓಡಾಟಕ್ಕೆ ಐದು ಸಿಟಿ ಬಸ್ಗಳ ವ್ಯವಸ್ಥೆ ಮಾಡಿಸಿದ್ದಾರೆ. ನಗರದ ವಿವಿಧ ಬಡಾವಣೆಗಳಿಂದ ಪೌರಕಾರ್ಮಿಕರನ್ನು ಹೊತ್ತು ತರುವ ಈ ಸಾರಿಗೆ ಬಸ್ಗಳು, ಕೆಲಸ ಮುಗಿದ ಬಳಿಕ ಮನೆಗೆ ಬಿಡುತ್ತಿವೆ. ಸಂಪೂರ್ಣ ಸಾರಿಗೆ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್ ರಾಜು ಕಟ್ಟಿಮನಿ, ಪಾಲಿಕೆ ಆಯುಕ್ತರ ಆದೇಶದ ಮೇಲೆ ಎಲ್ಲಾ ಪೌರಕಾರ್ಮಿಕರಿಗೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಅವರಿಗೆ ಕುಡಿಯಲು ನೀರು, ಆಹಾರ ಹಾಗೂ ಕೊರೊನಾ ಸುರಕ್ಷತಾ ಕಿಟ್ಗಳನ್ನು ನೀಡಲಾಗಿದೆ. ಪೌರಕಾರ್ಮಿಕರು ಮುಂಜಾನೆ 5 ಗಂಟೆಗೆ ಕೆಲಸಕ್ಕೆ ಹಾಜರಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ವಾಪಸ್ ಆಗಲಿದ್ದಾರೆ ಎಂದರು.
ಓದಿ: ರಸ್ತೆ ಬದಿ ಗುಡಿಸಲಿಗೆ ಡಿಕ್ಕಿ ಹೊಡೆದ ಲಾರಿ... ಒಂದೇ ಕುಟುಂಬದ ನಾಲ್ವರು ಸಾವು