ಹುಬ್ಬಳ್ಳಿ : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಭರದಿಂದ ಸಾಗಿದೆ. ಆದ್ರೆ, ಸ್ಮಾರ್ಟ್ ಆಗುತ್ತಿರುವ ನಗರಕ್ಕೆ ಗುಂಡಿಗಳ ಸಮಸ್ಯೆ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.
ಸುರಕ್ಷಿತವಾಗಿ ಹಾಗೂ ವ್ಯವಸ್ಥಿತ ರೀತಿ ಸಂಚಾರ ಮಾಡುವುದು ಕಷ್ಟಸಾಧ್ಯವಾಗಿದೆ. ಎಲ್ಲೆಂದರಲ್ಲಿ ಬಿದ್ದಿರುವ ರಸ್ತೆ ಗುಂಡಿಗಳಿಂದ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸುಮಾರು 2,790 ಕಿಲೋ ಮೀಟರ್ ರಸ್ತೆಯಿದೆ. ಆದರೆ, ಈ ರಸ್ತೆಯ ಪೈಕಿ ಬಹುತೇಕ ರಸ್ತೆಗಳು ಗುಂಡಿಯಿಂದ ಕೂಡಿದ್ದು, ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುವ ಭೀತಿ ಇದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡ ಮಹಾನಗರ ಪಾಲಿಕೆ ಮಾತ್ರ ಯಾವುದೇ ಕ್ರಮಗಳನ್ನು ಕೈಗೆತ್ತಿಕೊಳ್ಳದೇ ಸ್ಮಾರ್ಟ್ ಸಿಟಿ ಹೆಸರನ್ನು ಸೂಚಿಸುತ್ತಲೇ ಕಾಲಹರಣ ಮಾಡುತ್ತಿದೆ.
ಈ ಕುರಿತು ಹು-ಧಾ ಪಾಲಿಕೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ್ ಅವರನ್ನು ಕೇಳಿದ್ರೆ, ನಗರದ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಜೊತೆಗೆ ಪಾತ್ ಹೋಲ್ ಸಮಸ್ಯೆ ಕೂಡ ಹೆಚ್ಚಾಗಿದ್ದು, ಅನುದಾನದ ಕೊರತೆಯಿಂದ ಕೆಲಸ ವಿಳಂಬವಾಗಿದೆ. ಈಗಾಗಲೇ 240 ಕೋಟಿ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿದೆ. ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎನ್ನುತ್ತಿದ್ದಾರೆ.
ಅವಳಿನಗರದ ರಸ್ತೆಗಳಿಗೆ ಗುಂಡಿಗಳು ಶಾಪವಾಗಿ ಪರಿಣಮಿಸಿವೆ. ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿಯ ನಡುವೆ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಗಣಿನಾಡಿನಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ : ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳಿಗೆ ವಿಶೇಷ ಪೂಜೆ