ಬೆಂಗಳೂರು: ಲಂಡನ್ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದುರದೃಷ್ಟಕರ ಸಂಗತಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸ್ವತಃ ವೈದ್ಯರೂ ಆಗಿರುವ ಅವರು ಈ ಸಂಕಷ್ಟದಿಂದ ಶೀಘ್ರ ಪಾರಾಗಲೆಂದು ಸಮಸ್ತ ಭಾರತೀಯರು ಪ್ರಾರ್ಥಿಸೋಣ ಎಂದಿದ್ದಾರೆ. ಅಲ್ಲದೇ ಕೊರೊನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿರುವ ಈ ಹೊತ್ತಿನಲ್ಲಿ ದೇಶಕ್ಕೆ ದೇಶವೇ ಲಾಕ್ಡೌನ್ ಆಗಿದೆ. ಸರ್ಕಾರಗಳು ಅನಿವಾರ್ಯ ಉಪ ಕ್ರಮವಾಗಿರುವ ಈ ಲಾಕ್ಡೌನ್ನ್ನ ಜಾರಿಗೊಳಿಸಿದ ಮೇಲೆ ಪಿಡುಗು ನಿಯಂತ್ರಣಕ್ಕೆ ಬರುತ್ತಿದೆ. ಇದಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮೊದಲಾದ ಇಲಾಖೆಗಳ ಸಮಸ್ತ ಸಿಬ್ಬಂದಿ ವರ್ಗಕ್ಕೆ ಅಭಿನಂದಿಸಿದ್ದಾರೆ.

ಲಾಕ್ಡೌನ್ ಘೋಷಣೆಯಾದ ಬಳಿಕ ಗುಳೆ ಹೋಗುತ್ತಿರುವವರು, ವಲಸೆ ಹೋಗುತ್ತಿರುವ ಅಸಂಘಟಿತ ಕಾರ್ಮಿಕರು, ದಿನನಿತ್ಯ ದುಡಿದು ಬದುಕು ಸಾಗಿಸುತ್ತಿದ್ದ ಬಡ ಕೂಲಿಕಾರರ ಜೀವನ ತುಂಬಾ ದುಸ್ಥರವಾಗಿದೆ. ಉಪವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರವೂ ಈ ಬಗ್ಗೆ ಕ್ರಮಗಳನ್ನು ತೆಗೆದುಕೊಂಡಿದೆ. ನಮಗೆಲ್ಲರಿಗೂ ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿ ಇರುವುದರಿಂದ ನಾವೂ ಸರ್ಕಾರದೊಂದಿಗೆ ಕೈ ಜೋಡಿಸಿ ಸಂತ್ರಸ್ತರ, ಬಡವರ ನೆರವಿಗೆ ಬರಬೇಕಾಗಿದೆ. ಸರ್ಕಾರವೇ ಮಾಡಬೇಕೆಂದು ಕೂರುವ ಸಮಯ ಇದಲ್ಲ ಎಂದು ಸಲಹೆ ನೀಡಿದ್ದಾರೆ.
ಇನ್ನು ನನಗೆ ತುಂಬಾ ಸಂತೋಷದ ಸಂಗತಿ ಎಂದರೆ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವುದು. ನಮ್ಮ ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ಆಹಾರ ಮತ್ತು ಆರೋಗ್ಯದ ಕಿಟ್ಗಳನ್ನ ಬಡವರಿಗೆ ಹಂಚುತ್ತಿದ್ದಾರೆ. ಕೇವಲ ಶಾಸಕರಷ್ಟೇ ಅಲ್ಲದೇ ಪರಾಜಿತರಾದ ನಮ್ಮ ಪಕ್ಷದ ಅಭ್ಯರ್ಥಿಗಳು, ಭಾವಿ ಅಭ್ಯರ್ಥಿಗಳೂ ಕೂಡ ಸಮಯದ ಪ್ರಾಮುಖ್ಯತೆ ಮತ್ತು ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಕ್ರಿಯಾಶೀಲರಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಸೇವೆಯನ್ನು ನಾನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ ಮತ್ತು ಹೃದಯತುಂಬಿ ಅಭಿನಂದಿಸುತ್ತೇನೆ. ಈ ನಿಮ್ಮ ಕೈಂಕರ್ಯ ಹೀಗೆಯೇ ಮುಂದುವರಿಯಲಿ. ಈ ಲಾಕ್ಡೌನ್ ಕೊನೆಯಾಗುವವರೆಗೆ, ಈ ಪಿಡುಗು ತೊಲಗುವವರೆಗೆ ನೀವು ಹೀಗೆಯೇ ಜನರ ಸಮಸ್ಯೆಗೆ ಸ್ಪಂದಿಸುತ್ತಿರಿ. ನಾನೂ ಈ ನಿಟ್ಟಿನಲ್ಲಿ ಬಡವರಿಗೆ ನನ್ನ ಕೈಲಾದ ನೆರವು ನೀಡುವವನಿದ್ದೇನೆ. ಒಟ್ಟಿನಲ್ಲಿ ನಮ್ಮ ಪಕ್ಷವೂ ಕೂಡ ಈ ಹೊತ್ತಿನಲ್ಲಿ ಜನಸ್ಪಂದನಶೀಲವಾಗಿರುವುದು ನನಗೆ ಸಮಾಧಾನ ತಂದಿದೆ ಎಂದು ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.