ಬೆಂಗಳೂರು: ಸಂಪುಟ ವಿಸ್ತರಣೆ, ಸಂಪುಟ ಪುನರ್ರಚನೆ ವಿಷಯ ನಮ್ಮ ಮುಂದಿಲ್ಲ, ಕೇವಲ ರಾಜ್ಯದ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ದೆಹಲಿಗೆ ತೆರಳುತ್ತಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಹಾಗು ವಿವಿಧ ಸಚಿವರನ್ನು ಭೇಟಿಯಾಗುತ್ತೇನೆ. ರಾಜ್ಯದ ನೀರಾವರಿ ಯೋಜನೆಗಳು, ಅಭಿವೃದ್ಧಿ ಕಾಮಗಾರಿ ವಿಷಯಗಳ ಕುರಿತು ಸಂಬಂಧಪಟ್ಟ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ. ಪ್ರಧಾನಿಗಳು ಇನ್ನೂ ಸಮಯ ನೀಡಿಲ್ಲ, ಅವರು ನೀಡುವ ಸಮಯಕ್ಕೆ ಭೇಟಿಯಾಗಿ ಮಾತುಕತೆ ನಡೆಸಲಿದ್ದು ಶನಿವಾರ ವಾಪಸ್ ಮರಳುತ್ತೇನೆ ಎಂದರು.
ಸಂಪುಟ ಪುನರ್ ರಚನೆ ಹಾಗು ವಿಸ್ತರಣೆಯಂತಹ ಯಾವುದೇ ವಿಷಯ ನಮ್ಮ ಮುಂದಿಲ್ಲ, ಅಲ್ಲಿ ಚರ್ಚೆ ಆದ ನಂತರ ಮುಂದಿನದ್ದು ನೋಡೋಣ ಎನ್ನುವ ಮೂಲಕ ಹೈಕಮಾಂಡ್ ನಿರ್ಧಾರದ ಮೇಲೆ ಮುಂದಿನ ಬೆಳವಣಿಗೆ ನಡೆಯಲಿದೆ ಎಂದು ಸುಳಿವು ನೀಡಿದರು.
ದೊಡ್ಡ ಪ್ರಮಾಣದಲ್ಲಿ ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಲಕ್ಷ, ಕೋಟಿಗೂ ಅಧಿಕ ಹೂಡಿಕೆ ನಿರೀಕ್ಷೆ ಇದೆ. ಎಲ್ಲಾ ಕ್ಷೇತ್ರಲ್ಲಿಯೂ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಹೂಡಿಕೆಗೆ ಬಂದಿದ್ದಾರೆ. ಅವರಿಗೆಲ್ಲಾ ಭೂಮಿ, ನೀರು ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.