ಜೈಲು ಕೈದಿಗಳ ಅಸ್ವಾಭಾವಿಕ ಸಾವಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣ: ಕಾರಾಗೃಹ ಸುಧಾರಣಾ ಸಮಿತಿ ವರದಿ - ಜೈಲು ಕಟ್ಟಡಗಳಲ್ಲಿ ನೇಣು ಹಾಕಿಕೊಳ್ಳಲು ಸಾಧ್ಯವಾಗುವಂಥ
ಭಾರತದ ಜೈಲುಗಳಲ್ಲಿ ಸಂಭವಿಸುತ್ತಿರುವ ಕೈದಿಗಳ ಅಸ್ವಾಭಾವಿಕ ಸಾವುಗಳಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ನ ಕಾರಾಗೃಹ ಸುಧಾರಣಾ ಸಮಿತಿ ಹೇಳಿದೆ.


Published : Aug 31, 2023, 2:02 PM IST
ನವದೆಹಲಿ: 2017ರಿಂದ 2021ರ ಅವಧಿಯಲ್ಲಿ ದೇಶಾದ್ಯಂತ ಜೈಲುಗಳಲ್ಲಿ ಸಂಭವಿಸಿದ 817 ಅಸ್ವಾಭಾವಿಕ ಸಾವುಗಳಿಗೆ ಆತ್ಮಹತ್ಯೆಯೇ ಪ್ರಮುಖ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ನ ಕಾರಾಗೃಹ ಸುಧಾರಣಾ ಸಮಿತಿ ತಿಳಿಸಿದೆ. 817 ಅಸ್ವಾಭಾವಿಕ ಸಾವುಗಳಲ್ಲಿ 660 ಆತ್ಮಹತ್ಯೆಗಳಾಗಿದ್ದು, ಈ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 101 ಆತ್ಮಹತ್ಯೆಗಳು ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಮಿತಾವ್ ರಾಯ್ ನೇತೃತ್ವದ ಸಮಿತಿಯು ಹೇಳಿದೆ.
"ಜೈಲು ಕಟ್ಟಡಗಳಲ್ಲಿ ನೇಣು ಹಾಕಿಕೊಳ್ಳಲು ಸಾಧ್ಯವಾಗುವಂಥ ಮತ್ತು ನೇತಾಡಲು ಸಾಧ್ಯವಾಗುವಂಥ ಸ್ಥಳಗಳನ್ನು ಗುರುತಿಸುವ ಅವಶ್ಯಕತೆಯಿದೆ ಮತ್ತು ಇವುಗಳ ಜಾಗದಲ್ಲಿ ಕುಸಿದು ಬೀಳಬಹುದಾದ ವಸ್ತುಗಳನ್ನು ಬಳಸಿಕೊಂಡು ಆತ್ಮಹತ್ಯೆ ನಿರೋಧಕ ಸೆಲ್ಗಳು / ಬ್ಯಾರಕ್ಗಳನ್ನು ನಿರ್ಮಿಸುವ ಅವಶ್ಯಕತೆಯಿದೆ" ಎಂದು ಸಮಿತಿಯು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ವರದಿಗಳ ಅಂತಿಮ ಸಾರಾಂಶದಲ್ಲಿ ಹೇಳಿದೆ.
ಡಿಸೆಂಬರ್ 27, 2022 ರ ವರದಿಗಳ ಅಂತಿಮ ಸಾರಾಂಶವು ಜೈಲುಗಳಲ್ಲಿನ ಅಸ್ವಾಭಾವಿಕ ಸಾವುಗಳು, ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳು ಮತ್ತು ಭಾರತೀಯ ಜೈಲುಗಳಲ್ಲಿನ ಹಿಂಸಾಚಾರ ಸೇರಿದಂತೆ ಒಂಬತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಜೈಲು ಸುಧಾರಣೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಜೈಲುಗಳಲ್ಲಿನ ಜನದಟ್ಟಣೆ ಸೇರಿದಂತೆ ಹಲವಾರು ಅಂಶಗಳ ಬಗ್ಗೆ ಶಿಫಾರಸುಗಳನ್ನು ಮಾಡಲು ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್ನಲ್ಲಿ ನ್ಯಾಯಮೂರ್ತಿ (ನಿವೃತ್ತ) ರಾಯ್ ನೇತೃತ್ವದ ಮೂವರು ಸದಸ್ಯರ ಸಮಿತಿ ರಚಿಸಿತ್ತು.
ವರದಿಯ "ಜೈಲುಗಳಲ್ಲಿ ಅಸ್ವಾಭಾವಿಕ ಸಾವುಗಳು" (unnatural deaths in prisons) ಎಂಬ ಅಧ್ಯಾಯದಲ್ಲಿ, ಕಸ್ಟಡಿಯಲ್ಲಿ ಚಿತ್ರಹಿಂಸೆ ಅಥವಾ ಕಸ್ಟಡಿ ಸಾವು ನಾಗರಿಕರ ಮೂಲ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಇದು ಮಾನವ ಘನತೆಗೆ ಅವಮಾನ ಎಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್ಸಿಆರ್ಬಿ) ಪ್ರಕಟಿಸಿದ 2017 ರಿಂದ 2021 ರವರೆಗೆ ಭಾರತದ ಜೈಲು ಅಂಕಿ - ಅಂಶಗಳ (ಪಿಎಸ್ಐ) ವರದಿಯಲ್ಲಿ ಒದಗಿಸಲಾದ ದತ್ತಾಂಶವನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ಸಮಿತಿಯು ಭಾರತದ ಜೈಲುಗಳಲ್ಲಿನ ಸಾವುಗಳಿಗೆ (ನೈಸರ್ಗಿಕ ಮತ್ತು ಅಸ್ವಾಭಾವಿಕ) ಸಂಬಂಧಿಸಿದ ಪಿಎಸ್ಐ ದತ್ತಾಂಶವನ್ನು ವಿಶ್ಲೇಷಿಸಿದೆ ಮತ್ತು 2019 ರಿಂದ ಕಸ್ಟಡಿ ಸಾವುಗಳ ಸಂಖ್ಯೆ ಸ್ಥಿರವಾಗಿ ಏರಿಕೆ ಕಂಡಿದೆ ಎಂದು ಹೇಳಿದೆ. 2021 ರಲ್ಲಿ ಇದುವರೆಗೆ ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ಇದರಲ್ಲಿ ಆತ್ಮಹತ್ಯೆಯೇ (ಶೇಕಡಾ 80) ಅಸ್ವಾಭಾವಿಕ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ವರದಿ ತಿಳಿಸಿದೆ. 2017 ರಿಂದ 2021 ರವರೆಗೆ ಐದು ವರ್ಷಗಳಲ್ಲಿ, ವೃದ್ಧಾಪ್ಯದಿಂದಾಗಿ 462 ಕೈದಿಗಳು ಮತ್ತು ಅನಾರೋಗ್ಯದಿಂದ 7,736 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಅದು ಹೇಳಿದೆ.
2017-2021 ರ ನಡುವೆ ಭಾರತದ ಜೈಲುಗಳಲ್ಲಿ ಸಂಭವಿಸಿದ ಒಟ್ಟು 817 ಅಸ್ವಾಭಾವಿಕ ಸಾವುಗಳಲ್ಲಿ, 660 ಆತ್ಮಹತ್ಯೆಗಳು ಮತ್ತು 41 ಕೊಲೆಗಳು ನಡೆದಿವೆ ಎಂದು ಅದು ಹೇಳಿದೆ. ಈ ಅವಧಿಯಲ್ಲಿ 46 ಸಾವುಗಳು ಆಕಸ್ಮಿಕ ಸಾವುಗಳಿಗೆ ಸಂಬಂಧಿಸಿವೆ ಎಂದು ಸಮಿತಿ ಹೇಳಿದೆ. ಆದರೆ, ತಲಾ ಏಳು ಕೈದಿಗಳು ಹೊರಗಿನ ಶಕ್ತಿಗಳ ಹಲ್ಲೆ ಮತ್ತು ಜೈಲು ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ದೌರ್ಜನ್ಯದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ.
ಭಾರತದಾದ್ಯಂತದ 1,382 ಜೈಲುಗಳಲ್ಲಿನ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿಷಯದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಬರುವ ಸೆಪ್ಟೆಂಬರ್ 26 ರಂದು ಈ ಬಗ್ಗೆ ಮುಂದಿನ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ; ಸುಪ್ರೀಂ ಕೋರ್ಟ್ಗೆ ಕೇಂದ್ರದ ಸ್ಪಷ್ಟನೆ