ಚಂಡೀಗಢ: ಕಿಡ್ನಿ ಕಸಿ ಮಾಡಿಸಿಕೊಳ್ಳುವುದು ವೆಚ್ಚದಾಯಕ. ಇದು ಸಾಮಾನ್ಯ ರೋಗಿಗಳಿಗೆ ಕಷ್ಟಸಾಧ್ಯ. ಇದನ್ನರಿತ ಅನಾಮಿಕ ವೈದ್ಯರೊಬ್ಬರು ಚಂಡೀಗಢದ ವೈದ್ಯಕೀಯ ಕಾಲೇಜಿಗೆ(ಪಿಜಿಐ) 10 ಕೋಟಿ ರೂಪಾಯಿಗಳನ್ನು ರಹಸ್ಯವಾಗಿ ದೇಣಿಗೆ ನೀಡಿದ್ದಾರೆ. ಕಿಡ್ನಿ ಸಮಸ್ಯೆ ಎಂದು ಕೇಳಿಕೊಂಡು ಬಂದವರಿಗೆ ನೆರವಾಗಲಿ ಎಂಬುದು ಇದರ ಸದುದ್ದೇಶವಂತೆ.
ವಿಶೇಷ ಅಂದರೆ, ಪಿಜಿಐ ಕಾಲೇಜು ವಿಭಾಗವೊಂದರ ಎಚ್ಒಡಿಯೇ ಈ ರಹಸ್ಯ ದೇಣಿಗೆ ನೀಡಿದವರು ಎಂದು ಹೇಳಲಾಗಿದೆ. ಆದರೆ, ಅವರು ಹೆಸರನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಪಿಜಿಐನಲ್ಲಿ ದೇಣಿಗೆ ನೀಡಿದ ವೈದ್ಯರ ಸೊಸೆಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು. ಈ ವೇಳೆ ದುಬಾರಿ ಚಿಕಿತ್ಸೆಯನ್ನು ಕಂಡಿದ್ದ ಎಚ್ಒಡಿ ತಾನು ಬಡವರಿಗೆ ನೆರವಾಗಬೇಕು ಎಂದುಕೊಂಡು ಈ ರಹಸ್ಯ ದೇಣಿಗೆ ನೀಡಿದ್ದಾನೆ.
ರೋಗಿಯೊಬ್ಬರ ಕಿಡ್ನಿ ಕಸಿ ಮಾಡಿಸಲು ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದರ ಪ್ರಕಾರ 10 ಕೋಟಿ ರೂಪಾಯಿ ದೇಣಿಗೆಯಲ್ಲಿ 450 ರೋಗಿಗಳು ಕಿಡ್ನಿ ಕಸಿ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಬಡ ರೋಗಿಗಳ ಚಿಕಿತ್ಸೆಗಾಗಿ ಪಿಜಿಐ ಆನ್ಲೈನ್ ದೇಣಿಗೆ ಸಂಗ್ರಹಿಸುತ್ತಿದೆ. ಈ ವೇಳೆ, ಆ ವೈದ್ಯ ರಹಸ್ಯವಾಗಿ 10 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾನೆ. ಇದು ಪಿಜಿಐನ 60 ವರ್ಷಗಳ ಇತಿಹಾಸದಲ್ಲಿಯೇ ಯಾರೂ ನೀಡಿರದಷ್ಟು ಪ್ರಮಾಣದಲ್ಲಿ ಹಣ ಬಂದಿದೆ.
2017-18 ರಲ್ಲಿ ಪಿಜಿಐ ಉಚಿತ ನಿಧಿಯಲ್ಲಿ ವಾರ್ಷಿಕವಾಗಿ ಸುಮಾರು 2.5 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿತ್ತು. 2021- 22ರಲ್ಲಿ 2.31 ಕೋಟಿ ರೂಪಾಯಿ ದೇಣಿಗೆ ಬಂದಿತ್ತು. ಈ ಬಾರಿ ಒಬ್ಬರೇ 10 ಕೋಟಿ ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಹಿಂದೆ ಅಂದರೆ 2020 ರಲ್ಲಿ ಎಚ್ಕೆ ದಾಸ್ ಕುಟುಂಬವು ಪಿಜಿಐಗೆ 50 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿತ್ತು.
ಓದಿ: ಆಫ್ರಿಕಾದಿಂದ ಭಾರತಕ್ಕೆ 8 ಚೀತಾ : ಸೆ 17ಕ್ಕೆ ಜೈಪುರ ವಿಮಾನ ನಿಲ್ದಾಣಕ್ಕೆ ಆಗಮನ