ನವದೆಹಲಿ: ವಿಪರೀತ ವಾಯುಮಾಲಿನ್ಯ ರಾಷ್ಟ್ರ ರಾಜಧಾನಿಗರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದರ ಪರಿಣಾಮವೆಂಬಂತೆ ಇಲ್ಲಿನ ಎಲ್ಲ ಪ್ರಾಥಮಿಕ ಶಾಲೆಗಳಿಗೆ ನವೆಂಬರ್ 5 ರ ಶನಿವಾರದಿಂದ ರಜೆ ಘೋಷಿಸಲಾಗಿದೆ. ಈ ನಿರ್ಧಾರವನ್ನು ಇಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
"ನಾವು ವಾಯುಮಾಲಿನ್ಯ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ, ನಾಳೆಯಿಂದ ಎಲ್ಲ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದೇ ರೀತಿ 5 ನೇ ತರಗತಿಗಿಂತ ಮೇಲಿನ ತರಗತಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು" ಎಂದು ಅವರು ತಿಳಿಸಿದರು.
ಮಕ್ಕಳ ಜತೆ ಎಎಪಿ ಚೆಲ್ಲಾಟ- ಬಿಜೆಪಿ: ದೆಹಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಮಾತನಾಡಿ, ಎಎಪಿ ಸರರ್ಕಾರ ಮಕ್ಕಳ ಜೀವನದ ಜತೆ ಚೆಲ್ಲಾಟವಾಡುವುದನ್ನು ಬಿಟ್ಟು ಶಾಲೆಗಳನ್ನೇ ಮುಚ್ಚಬೇಕು. ದೆಹಲಿಯ ಅರೆಕಾಲಿಕ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಅವರು ನಗರದಲ್ಲಿ ಮಾಲಿನ್ಯ ತಡೆಗಟ್ಟಲು ತಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಟೀಕಿಸಿದ್ದಾರೆ.
ದೆಹಲಿ ಪೋಷಕರ ಒಕ್ಕೂಟದ ಆಗ್ರಹವೇನು?: ಮಾಲಿನ್ಯದ ಪರಿಸ್ಥಿತಿ ಅಪಾಯಕಾರಿಯಾಗಿದೆ. ವಿಷಕಾರಿ ಗಾಳಿಯ ನಡುವೆ ಮಕ್ಕಳು ಶಾಲೆಗೆ ಹೋಗಬೇಕಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಶಾಲೆಗಳನ್ನು ಮುಚ್ಚಬೇಕು. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ಮತ್ತೆ ಪ್ರಾರಂಭಿಸಬೇಕೆಂದು ಪೋಷಕರ ಒಕ್ಕೂಟ ಒತ್ತಾಯಿಸಿದೆ.
ಇದನ್ನೂ ಓದಿ:ಮತ ಹಾಕಲಿಲ್ಲವೆಂದು ತರಗತಿಗೆ ಬಾರದಂತೆ ದಲಿತ ವಿದ್ಯಾರ್ಥಿನಿಗೆ ಸೂಚನೆ: ದೂರು ದಾಖಲು